ಬಾಗಲಕೋಟೆ : ಕುಡಿದ ಮತ್ತಿನಲ್ಲಿ ಪತಿರಾಯನೋರ್ವ ತನ್ನ ಪತ್ನಿಯ ಅರ್ಧ ತಲೆಬೋಳಿಸಿದ ಘಟನೆ ಜಮಖಂಡಿ ತಾಲೂಕಿನ ಕಡಕೋಳ
ಗ್ರಾಮದಲ್ಲಿ ನಡೆದಿದೆ. ಬಸಪ್ಪ ದೇವರವರ ಹಾಗೂ ಪತ್ನಿ ಶ್ರೀದೇವಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಪತಿಯ ನಡವಳಿಕೆಯಿಂದ ಬೇಸತ್ತಿದ್ದ
ಪತ್ನಿ ಶ್ರೀದೇವಿ ತವರ ಮನೆ ಸೇರಿದ್ದಳು. ಎರಡು ತಿಂಗಳ ಬಳಿಕ ಸಖಿ ತಂಡದವರು ಆಪ್ತ ಸಮಾಲೋಚನೆ ನಡೆಸಿ ಶ್ರೀದೇವಿಯನ್ನು ಪತಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಶನಿವಾರ ರಾತ್ರಿ ಮತ್ತೆ ಕುಡಿದು ಬಂದ ಬಸಪ್ಪ ಪತ್ನಿಯೊಂದಿಗೆ ಜಗಳಕ್ಕೆ ಮುಂದಾಗಿದ್ದಾನೆ. ಅದು ವಿಕೋಪಕ್ಕೆ ತೆರಳಿ ಆಕೆಯ ತಲೆಬೋಳಿಸಿದ್ದಾನೆ ಎಂದು ತಿಳಿದು ಬಂದಿದೆ. ಶ್ರೀದೇವಿ ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಜಮಖಂಡಿ ಗ್ರಾಮೀಣ ಪೊಲೀಸರು ಘಟನೆ ಸಂಬAಧ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.


