ಬಸವಕಲ್ಯಾಣ: ಉದ್ಯಮಿಯೊಬ್ಬರ ಮೇಲೆ ಗುಂಡುಹಾರಿಸಿ ಕೋಟ್ಯಾಂತರ ರೂ. ದರೋಡೆ ಮಾಡಿದ ಜಿಪಂ ಪಂಚಾಯತ್ ಮಾಜಿ ಸದಸ್ಯ ಗುಂಡುರೆಡ್ಡಿ ಅವರನ್ನು ಬಂಧಿಸಿದ ಪ್ರಕರಣ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ(ಆರ್) ಗ್ರಾಮದಲ್ಲಿ ಜರುಗಿದೆ.
ರಾಜೇಶ್ವರ ಕ್ಷೇತ್ರದ ಜಿಪಂ ಪಂಚಾಯತ್ ಮಾಜಿ ಸದಸ್ಯ ಗುಂಡುರೆಡ್ಡಿ ಹಾಗೂ ಇವರ ಮೂವರು ಸಹಚರರು ದರೋಡೆ ಮಾಡಿದ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ನೆರೆಯ ಆಂದ್ರಪ್ರದೇಶದ ತಿರುಪತಿ ಮೂಲದ ಉದ್ಯಮಿಯಾಗಿರುವ ಉಮಾಶಂಕರ್ ಭಾರದ್ವಜ್ ದರೋಡೆಗೆ ಒಳಗಾದ ವ್ಯಕ್ತಿಗಳಾಗಿದ್ದಾರೆ.
ಉದ್ಯಮಿ ಉಮಾಶಂಕರ್ ಅವರು ಮಹಾರಾಷ್ಟ್ರದಿಂದ ಆಂದ್ರಪ್ರದೇಶಕ್ಕೆ ತೆರಳುವ ವೇಳೆ ಮಾರ್ಗದಲ್ಲಿ ಬರುವ ಹಣಮಂತವಾಡಿ ಗ್ರಾಮದ ಹತ್ತಿರದ ತಮ್ಮ ಸ್ನೇಹಿತನ ಕಂಪನಿಯೊಂದರ ಬಳಿ ಫ್ರೇಸ್ಆಪ್ ಆಗಲೆಂದು ಕಾರು ನಿಲ್ಲಿಸಿದ್ದಾರೆ. ಈ ವೇಳೆ ಬೈಕ್ ಮೇಲೆ ಸ್ಥಳಕ್ಕೆ ಆಗಮಿಸಿದ ಗುಂಡುರೆಡ್ಡಿ ಕಾರಿನಲ್ಲಿ ಇದ್ದ ಹಣ ದರೋಡೆ ಮಾಡುವ ಉದ್ದೇಶದಿಂದ ತಮ್ಮ ಬಳಿ ಇದ್ದ ರಿವಲ್ವಾರ್ನಿಂದ ಎರಡು ಸುತ್ತು ಗುಂಡುಹಾರಿಸಿ 3.50 ಕೋಟಿ ರೂ. ದರೋಡೆ ಮಾಡಿದ್ದಾರೆ. ಆದರೆ ಗುಂಡು ಉದ್ಯಮಿ ಪಕ್ಕದಿಂದ ಹಾರಿಹೋದ ಪರಿಣಾಮ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಉಮಾಶಂಕರ್ ಅವರು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನ ಆಧಾರದಲ್ಲಿ 4 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರ್ ತಂಡ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡರ್ ನೇತೃತ್ವದ ಪೊಲೀಸರ ತಂಡ ಕಾರ್ಯಚರಣೆ ನಡೆಸಿ, ದರೋಡೆ ಮಾಡಿದ ಆರೋಪ ಹೊತ್ತ ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಹಾಗೂ ಇವರ ಸಹೋದರ ವಿಜಯರೆಡ್ಡಿ ಮತ್ತೊಬ್ಬ ಆರೋಪಿ ಸಂಜಯ್ ಎನ್ನುವಾತನನ್ನು ಬಂಧಿಸಿ, ಅವರಿಂದ 2.62 ಕೋಟಿ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಬಂಧನಕ್ಕಾಗಿ ಪೊಲೀಸ್ರು ಜಾಲ ಬಿಸಿದ್ದಾರೆ.


