ಬನವಾಸಿ: ನಕಲಿ ಬಂಗಾರ ನೀಡಿ 4.5 ಲಕ್ಷ ರೂ. ವಂಚಿಸಿದ್ದ ವ್ಯಕ್ತಿಯನ್ನು ಬನವಾಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆನವಟ್ಟಿಯ ಕೊಟ್ರಪ್ಪ ದುರ್ಗಪ್ಪ ಕೊರ್ಚರ್ (64) ಬಂಧಿತ ಆರೋಪಿಯಾಗಿದ್ದಾನೆ. ಕುಮಟಾ ತಾಲೂಕಿನ ಹೆಗಡೆಯ ಮಾರುತಿ ಅಂಗಪ್ಪ ನಾಯ್ಕ ವಂಚನೆಗೆ ಒಳಗಾಗಿದ್ದರು. ಸಾಗರ ತಾಲೂಕು ಉಳವಿಯಲ್ಲಿ ಮಾರುತಿ ತನ್ನ ಮಗಳಿಗೆ ಬಂಗಾರ ಮಾಡಿಸುವ ಉದ್ದೇಶದಿಂದ ತಿರುಗಾಟ ಮಾಡುತ್ತಿದ್ದಾಗ ಕೊಟ್ರಪ್ಪ ತಾನು ಬಂಗಾರದ ವ್ಯಾಪಾರಿ ಎಂದು ನಂಬಿಸಿ ಮಾದರಿಗಾಗಿ ಒಂದು ಬಂಗಾರದ ನಾಣ್ಯವನ್ನು ಕಡಿಮೆ ಬೆಲೆಯಲ್ಲಿ ನೀಡಿದ್ದ. ಈತ ಬಂಗಾರದ ಅಂಗಡಿಯಲ್ಲಿ ಆ ನಾಣ್ಯ ಪರೀಕ್ಷೆ ಮಾಡಿಸಿದಾಗ ಅಸಲಿ ಬಂಗಾರ ಎಂಬುದು ಧೃಢಪಟ್ಟಿತ್ತು. ಬಳಿಕ 4.5 ಲಕ್ಷ ರೂ. ಪಡೆದಿದ್ದ ಕೊಟ್ರಪ್ಪ, ದಾಸನಕೊಪ್ಪದಲ್ಲಿ 240 ನಕಲಿ ಬಂಗಾರದ ನಾಣ್ಯಗಳನ್ನು ನೀಡಿದ್ದ. ಮೋಸಹೋಗಿದ್ದು ಗೊತ್ತಾದ ಮಾರುತಿ ಬನವಾಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಶೇಷ ತನಿಖೆ ಕೈಗೊಂಡ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.


