ಪುತ್ತೂರು: ತವರು ಮನೆಗೆ ತೆರಳಿದ್ದ ಮಹಿಳೆಯೋರ್ವರು ಅಲ್ಲಿ ತನ್ನ ೧೧ ತಿಂಗಳ ಮಗುವನ್ನು ಬಿಟ್ಟು ಪುತ್ತೂರಿನಲ್ಲಿದ್ದ ತನ್ನ ಪ್ರಿಯತಮನನ್ನು ಸೇರಿಕೊಂಡಿದ್ದು ಆಕೆಯನ್ನು ಹುಡುಕಿಕೊಂಡು ಮನೆಯವರು ತಡ ರಾತ್ರಿ ಪುತ್ತೂರಿನ ಕೋಡಿಂಬಾಡಿಯಲ್ಲಿ ಹುಡುಕಾಟ ನಡೆಸಿದ್ದು ಆದರೆ ಅಲ್ಲಿಂದ ಅವರಿಬ್ಬರು ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ ಘಟನೆ ಜೂ. ೧೩ ರಂದು ತಡ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ಕೋಡಿಂಬಾಡಿ ಭಾಗದಲ್ಲಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮನೆಯವರಿಗೆ ಮೊದಲೇ ಇತ್ತು. ತವರು ಮನೆಯಲ್ಲಿದ್ದ ಆಕೆ ದಿಡೀರನೆ ತನ್ನ ಮಗುವನ್ನು ತೊರೆದು ನಾಪತ್ತೆಯಾಗಿದ್ದಳು. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆಕೆ ತಪ್ಪಿಸಿಕೊಂಡು ಆತನ ಬಳಿಗೆ ಬಂದಿರಬಹುದು ಎಂದು ಭಾವಿಸಿ ಆಕೆಯ ತವರು ಮನೆಯವರು ಪುತ್ತೂರಿಗೆ ಬಂದಿದ್ದಾರೆ. ರಾತ್ರಿ ಸುಮಾರು ೧೧ ಗಂಟೆಯ ವೇಳೆ ಕೋಡಿಂಬಡಿಗೆ ಬಂದಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ರವರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿತಿ ನೀಡಿದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಪೊಲಿಸರು ಬಂದಿದ್ದು ಪೊಲೀಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ನಡೆಸಿದ ಅವರು ಕೊನೆಗೆ ಪುತ್ತೂರಿಗೆ ಬಂದು ನಗರ ಠಾಣೆಯಲ್ಲಿ ಸೇರಿಕೊಂಡಿದ್ದರು. ಬಳಿಕ ಪೊಲೀಸರು ಟವರ್ ಲೊಕೇಶನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದಾಗಿ ಮಾಹಿತಿ ಲಬ್ಯವಾಗಿದ್ದು ಸಿದ್ದಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಗ್ರಾಪಂ ಸದಸ್ಯನ ಕಾಳಜಿಗೆ ಪ್ರಶಂಸೆ
ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ತಕ್ಷಣಕ್ಕೆ ನೆರವಿಗೆ ಸಿಕ್ಕಿದ್ದು ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್. ತಡ ರಾತ್ರಿ ಯಾರೂ ಇಲ್ಲದ ವೇಳೆ ಊರು ಕೇರಿ ಗೊತ್ತಿಲ್ಲದ ಆ ಕುಟುಂಬಕ್ಕೆ ಗ್ರಾಪಂ ಸದಸ್ಯ ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ್ದಲ್ಲದೆ ಪೊಲೀಸರನ್ನು ಕರೆಸಿ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದ್ದು ಹುಬ್ಬಳ್ಳಿಯಿಂದ ಬಂದ ಕುಟುಂಬ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರ ಸಹಾಯಕ್ಕೆ ಅಭಿನಂದಿಸಿದ್ದಾರೆ.
ಉಚಿತ ಬಸ್ಸಿನಲ್ಲಿ ಬಂದಿದ್ದಳು
ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆ ಎಂದು ನಾವು ಗ್ರಹಿಸಿಯೇ ಇರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕುತ್ತಿದ್ದರು.


