ಪುತ್ತೂರು : ದಸರಾ ಹಬ್ಬ ಬಂತೆಂದರೆ ಹಲವು ಬಗೆಯ ವೇಶಬೂಶಣಗಳು ಕಣ್ಣಿಗೆ ಕಾಣಸಿಗುತ್ತೆ ,ಇದರ ಮಧ್ಯೆ ನಗರದಲ್ಲಿ ಪ್ರೇತ ಎಂಟ್ರಿ ಕೊಟ್ಟಿದೆ. ತಮ್ಮಷ್ಟಕ್ಕೆ ನಡೆದುಕೊಂಡು ಹೋಗುವವರ ಮಧ್ಯೆ ದಿಢೀರನೆ ಪ್ರತ್ಯಕ್ಷಗೊಳ್ಳುವ ಈ ಪ್ರೇತ ಹಲವರನ್ನು ಏಕಾಏಕಿ ಬೆಚ್ಚಿ ಬೀಳುವಂತೆ ಮಾಡಿದೆ. ಒಮ್ಮೆ ಮರಗಳಲ್ಲಿ ನೇತಾಡಿಕೊಂಡು, ಮತ್ತೊಮ್ಮೆ ಕಂಬ, ಗೋಡೆಗಳಿಗೆ ಅಮುಕಿಕೊಂಡು ಕಾಣಿಸುವ ಈ ಪ್ರೇತ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಆಪದ್ಭಾಂದವ ಹೆಸರಿನ ರಿಕ್ಷಾ ನಡೆಸುವ ಚಾಲಕ ದಿವಾಕರ ದೇವಾಡಿಗ ಕಳೆದ ೧೨ ವರ್ಷಗಳಿಂದ ನವರಾತ್ರಿಯ ವಿವಿಧ ವೇಷ ಧರಿಸುತ್ತಿದ್ದಾರೆ. ಸುಮಾರು ೬ ವರ್ಷಗಳಿಂದ ಪ್ರೇತದ ವೇಷ ಧರಿಸಿ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ರಸ್ತೆ ಬದಿ, ಕರೆಂಟ್ ಕಂಬದಲ್ಲಿ ನಿಂತುಕೊAಡು ವಿಚಿತ್ರ ಶಬ್ದ ಮಾಡುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ.
ಸುಮಾರು ೫೫ ವರ್ಷ ಪ್ರಾಯದ ದಿವಾಕರ ದೇವಾಡಿಗ ಅವರು ದಿನವಿಡೀ ವ್ರತಾಚರಣೆಯೊಂದಿಗೆ ನವರಾತ್ರಿ ದಿನಗಳಲ್ಲಿ ಪ್ರೇತದ ವೇಷದಲ್ಲಿ ತಿರುಗಾಡಲಿದ್ದಾರೆ. ನಾಗ ಆರ್ಟ್ಸ್ನವರು ದಿವಾಕರ ಅವರಿಗೆ ಪ್ರತಿ ದಿನ ಬೆಳಗ್ಗೆ ಪ್ರೇತದ ವೇಷ ಹಾಕುತ್ತಿದ್ದು, ತಾನು ಮೂರನೇ ತರಗತಿಯಲ್ಲಿರುವಾಗ ಪಠ್ಯದಲ್ಲಿದ್ದ ವ್ಯಕ್ತಿಯ ದೇಹದ ಚಿತ್ರಣವನ್ನು ಕಲ್ಪಿಸಿಕೊಂಡು ಈ ವೇಷ ಹಾಕಲು ಆರಂಭಿಸಿದ್ದೇನೆ. ಯಾರಲ್ಲೂ ಹಣ ಕೇಳುವುದಿಲ್ಲ, ಕೊಟ್ಟವರಿಂದ ತೆಗೆದುಕೊಳ್ಳುತ್ತೇನೆ. ಇಷ್ಟವಿಲ್ಲ, ಬರಬೇಡಿ ಎಂದರೆ ಮತ್ತೆ ಅಲ್ಲಿಗೆ ಹೋಗುವುದಿಲ್ಲ. ಹಲವು ಮಂದಿ ಅವರೇ ಕರೆಸಿಕೊಂಡು ಹಣ ನೀಡುತ್ತಾರೆ ಎಂದು ದಿವಾಕರ ದೇವಾಡಿಗ ತಿಳಿಸಿದ್ದಾರೆ.


