Sunday, March 15, 2026
Flats for sale
Homeಜಿಲ್ಲೆಪುತ್ತೂರು ; ಅ. 15ರಿಂದ 26 ರ ವರೆಗೆ 21ನೇ ವರ್ಷದ ‘ಪುತ್ತೂರು ದಸರಾ ಮಹೋತ್ಸವ’.

ಪುತ್ತೂರು ; ಅ. 15ರಿಂದ 26 ರ ವರೆಗೆ 21ನೇ ವರ್ಷದ ‘ಪುತ್ತೂರು ದಸರಾ ಮಹೋತ್ಸವ’.

ಪುತ್ತೂರು : ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ 21ನೇ ವರ್ಷದ ‘ಪುತ್ತೂರು ದಸರಾ ಮಹೋತ್ಸವ’ ಅ. 15ರಿಂದ 26ರ ತನಕ ಸಂಪ್ಯ ಉದಯಗಿರಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 15ರಂದು ಬೆಳಿಗ್ಗೆ 10ಕ್ಕೆ ಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಠೆ ನಡೆದು, ಬಳಿಕ ಕಾರ್ಯಕ್ರಮಗಳಿಗೆ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ದೀಪ ಬೆಳಗಿಸುವ ಮೂಲ ಚಾಲನೆ ನೀಡುವರು. ನಗರಸಭೆ ಸದಸ್ಯ ಶೀನಪ್ಪ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಪಾಲ್ಗೊಳ್ಳುವರು. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸುವರು. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಪಾಲ್ಗೊಳ್ಳುವರು ಎಂದು ಹೇಳಿದರು.

ಅ. 20ರಂದು ಬೆಳಿಗ್ಗೆ ಶಾರದಾ ಪ್ರತಿಷ್ಠೆ, 22ರಂದು ಸಂಜೆ 5 ಗಂಟೆಗೆ ಸಾಮೂಹಿಕ ಆಯುಧಪೂಜೆ, ಅ. 26ರಂದು ಬೆಳಿಗ್ಗೆ 8ರಿಂದ ಸಾಮೂಹಿಕ ಚಂಡಿಕಾಹವನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 3ರಿಂದ ದಸರಾ ಮೆರವಣಿಗೆ ನಡೆಯಲಿದ್ದು, ದರ್ಬೆ ಬೈಪಾಸ್ ಅಶ್ವಿನಿ ವೃತ್ತದ ಬಳಿಯಿಂದ ಬೊಳುವಾರು ತನಕ ಶೋಭಾಯಾತ್ರೆ ನಡೆದು, ಶ್ರೀ ದೇವಸ್ಥಾನದ ಗದ್ದೆಯ ಕೆರೆಯಲ್ಲಿ ಶಾರದಾ ಮೂರ್ತಿ ಜಲಸ್ತಂಭನಗೊಳ್ಳಲಿದೆ. ಪ್ರತಿ ದಿನ ಭಜನೆ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ವೈಭವ, ನೃತ್ಯಾರ್ಪಣ, ಸಾಂಸ್ಕೃತಿಕ ವೈಭವ, ತುಳು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕುಕ್ಕಾಡಿ, ಗೌರವ ಸಲಹೆಗಾರ ರಾಜೇಶ್ ಬನ್ನೂರು, ಸದಸ್ಯ ರಂಗನಾಥ ರಾವ್ ಟಿ. ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular