ನವದೆಹಲಿ : ದೇಶದಲ್ಲಿ ತೀವ್ರ ಚರ್ಚೆ ,ವಿರೋಧ ಮತ್ತು ಜಿದ್ದಾ ಜಿದ್ದಿಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆ ಲೋಕಸಭೆಯಲ್ಲಿಂದು ಮಂಡಿಸಿದರು.
ವಿರೋಧ ಪಕ್ಷಗಳು ಜನರಿಗೆ ತಪ್ಪು ಮಾಹಿತಿ ಹರಡುತ್ತಿವೆ ಎನ್ನುವ ಹೇಳಿಕೆ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ವೇದಿಕೆಯಾಗಿದೆ. 1995 ರಲ್ಲಿ ಮಸೂದೆ ಪರಿಚಯಿಸಿದಾಗ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಈ ಹಿಂದೆಯೂ ಹಲವು ಬಾರಿ ತಿದ್ದುಪಡಿ ತಂದಾಗಿನಿಂದಲೂ ವಿರೋಧ ವ್ಯಕ್ತವಾಗಲಿಲ್ಲ. ಈಗ ಎನ್ಡಿಎ ಸರ್ಕಾರ ತಿದ್ದುಪಡಿ ಮಾಡಿರುವುದಕ್ಕೆ ಅಸಂವಿಧಾನಿಕ ಎಂದು ಅರಚುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳ ವಿರುದ್ಧ ಸಚಿವ ಕಿರಣ್ ರಿಜಿಜು ಕಿಡಿಕಾರಿದರು.
ಇಂಡಿಯಾ ಮೈತ್ರಿ ಕೂಟ ಧಾರ್ಮಿಕ ಮುಖಂಡರು ಮುಗ್ಧ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆ. ಅದನ್ನು ನಾವು ಬಯಲಿಗೆಳೆಯುತ್ತೇವೆ. ಸಿಎಎ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುತ್ತದೆ ಎಂಬುದನ್ನು ವಿಪಕ್ಷಗಳು ಬಿಂಬಿಸಿದವು. ಆದರೆ, ಅದು ಆಗಲಿಲ್ಲ. ವಕ್ಫ್ ತಿದ್ದುಪಡಿ ವಿಚಾರದಲ್ಲೂ ಅದೇ ಸುಳ್ಳು ನಿರೂಪಣೆಯನ್ನು ಹರಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಡಿಯಾ ಮೈತ್ರಿಕೂಟದ 239 ಮಂದಿ ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದು ಎನ್ ಡಿಎ ಮೈತ್ರಿಕೂಟದ 292 ಮಂದಿ ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಹಲವು ಪಕ್ಷಗಳು ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿವೆ. ಎನ್ ಡಿಎ ಮೈತ್ರಿಕೂಟ ವಕ್ಪ್ ಮಸೂದೆಯನ್ನು ಬೆಂಬಲಿಸುವಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್,ಶಿವಸೇನೆ ಉದ್ದವ್ ಠಾಕೆ ಬಣ, ಡಿಎಂಕೆ, ಎನ್ ಸಿಪಿ, ಆರ್ ಜೆಡಿ,ಸಿಪಿಐ, ಸಿಪಿಎಂ ಸೇರಿದಂತೆ ಇನ್ನಿತರೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ೨೩೯ ಸದಸ್ಯರು ಮಸೂದೆ ಮಂಡನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿವೆ. ಎನ್ ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿಯು, ಶಿವಸೇನೆ, ಎನ್ ಸಿಪಿ, ಟಿಡಿಪಿ, ಜನಸೇನಾ, ಜೆಡಿಎಸ್, ಎಲ್ ಜೆಪಿ, ಹಿಂದೂಸ್ತಾನ್ ಹವಾಮಿ ಪಕ್ಷ ಸೇರಿದಂತೆ 292 ಮಂದಿ ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ.
ವಿವಾದ ಬಿರುಗಾಳಿ ಎಬ್ಬಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ ವಿವಿಧ ಪಕ್ಷಗಳು ತಮ್ಮ ಸಂಸದರಿಗೆ ವಿಪ್ ಜಾರಿ ಮಾಡಿವೆ. ವಕ್ಫ್ ತಿದ್ದು ಪಡಿ ಮಸೂದೆಯನ್ನು ವೈಎಸ್ ರ್ ಸೇರಿದಂತೆ ಅನೇಕ ಪಕ್ಷಗಳು ವಿರೋಧಿಸಿದ್ದು ಎನ್ ಡಿಎ ಮೈತ್ರಿ ಕೂಟದ ಅಂಗವಾಗಿರುವ ಜೆಡಿಯು ಬೆಂಬಲಿಸಿದೆ.
ತಿದ್ದುಪಡಿ ಮುಸೂದೆಯ ಬಗ್ಗೆ ಚರ್ಚೆಗೆ 8 ಗಂಟೆಗಳ ಕಾಲ ಸಮಯ ನಿಗದಿ ಮಾಡಲಾಗಿದೆ., ವಿರೋಧ ಪಕ್ಷಗಳ ನಾಯಕರು ಚರ್ಚೆಯಲ್ಲಿ ಭಾಗವಹಿಸಿ ಅದನ್ನು ಬಿಟ್ಟು ಜನರಲ್ಲಿ ಗೊಂದಲ ಮತ್ತು ತಪುö್ಪ ಮಾಹಿತಿ ಹರಡುವ ಕೆಲಸ ಮಾಡಬೇಡಿ, ಎಲ್ಲಾ ಗೊಂದಲಗಳಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.


