ನವದೆಹಲಿ : ಮಸೂದೆಗಳ ಬಗ್ಗೆ ಇಂತಿಷ್ಟೇ ಕಾಲಮಿತಿಯಲ್ಲಿ (3 ತಿಂಗಳಲ್ಲಿ) ನಿರ್ಧಾರ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ತೀವ್ರವಾಗಿ ಟೀಕಿಸಿದ್ದಾರೆ.
ತಮ್ಮ ಅಚ್ಚರಿಯ ಹೇಳಿಕೆಯಲ್ಲಿ ಇಡೀ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹಾಗೂ ಜಡ್ಜ್ಗಳ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ೬ನೇ ರಾಜ್ಯಸಭಾ ಕಾಂಕ್ಲೇವ್ನಲ್ಲಿ ಮಾತನಾಡಿದ ಧನಕರ್, ಇತ್ತೀಚಿನ ತೀರ್ಪೊಂದರಲ್ಲಿ ರಾಷ್ಟ್ರಪತಿಗಳಿಗೇ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದು ನಿಜಕ್ಕೂ ಆತಂಕಕಾರಿಸಂಗತಿ . ಅಷ್ಟಕ್ಕೂ ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ? ನಮ್ಮಲ್ಲಿ ಶಾಸಕಾಂಗದ ಕೆಲಸ ಮಾಡುವ ಹಾಗೂ ಕಾರ್ಯಾಂಗ ಕಾರ್ಯಭಾರ ನಿರ್ವಹಿಸುವ ಜಡ್ಜ್ಗಳಿದ್ದಾರೆ. ಒಂದರ್ಥದಲ್ಲಿ ಅವರು
ಸೂಪರ್ ಪಾರ್ಲಿಮೆಂಟೇ’ ಆಗಿ ಬಿಟ್ಟಿದ್ದಾರೆ. ಇಂಥ ಪ್ರಜಾಪ್ರಭುತ್ವವನ್ನು ಪಡೆಯುವುದಕ್ಕಾಗಿಯೇ ನಾವು ಇಷ್ಟೊಂದು ಪ್ರಯತ್ನಪಟ್ಟಿದ್ದು ಎಂದು ಪ್ರಶ್ನಿಸಿದ್ದಾರೆ.
ಸಂಸತ್ತು ತೀರ್ಪು ಬರೆಯಲು ಸಾಧ್ಯವಿಲ್ಲ. ಸಂಸತ್ತಿನ ಕೆಲಸ ಶಾಸನಗಳನ್ನು ರಚಿಸುವುದು ಹಾಗೂ ಕಾರ್ಯಾಂಗವನ್ನೂ ಒಳಗೊಂಡು ಉಳಿದೆಲ್ಲರೂ ಅದಕ್ಕೆ ಬದ್ಧವಾಗಿರುವಂತೆ ನೋಡಿಕೊಳ್ಳುವುದು. ಆದರೆ ಇಂದು ಸಂಸತ್ತಿನ ಈ ಹಕ್ಕುಗಳಿಗೆ ನ್ಯಾಯಾಲಯಗಳು ಸವಾಲೆಸೆದಂತೆ ಕಾಣುತ್ತಿಲ್ಲವೇ ಎಂದುಪ್ರಶ್ನಿಸಿದರು.
ಇತ್ತೀಚೆಗೆ ಕೋರ್ಟ್ಗಳ ಆದೇಶದ ಮೇರೆಗೆ ಕಾರ್ಯಾಂಗ ಕೆಲಸ ಮಾಡುತ್ತಿದೆ. ಸರ್ಕಾರದ ಕಾರ್ಯ ಸೂಚಿಯಂತೆ ಕಾರ್ಯಾಂಗ ಕೆಲಸ ಮಾಡಿದರೆ ಅದನ್ನು ಸಂಸತ್ತಿನಲ್ಲಿ ಪ್ರಶ್ನಿಸಬಹುದು, ನ್ಯಾಯಾಲಯಗಳ ಆದೇಶದನ್ವಯ ಕೆಲಸ ಮಾಡಿದರೆ ಅದನ್ನು ಪ್ರಶ್ನಿಸಲು ಹೇಗೆ ಸಾಧ್ಯ? ಇದು ನಿಜಕ್ಕೂ ಕಳವಳಕಾರಿ ಎಂದರು.