ಡೆಹ್ರಾಡೂನ್: ಧರ್ಮದ ಆಧಾರದ ಮೇಲೆ ನಾಗರಿಕ ಹಕ್ಕುಗಳಲ್ಲಿ ತಾರತಮ್ಯ ಅಳಿಸುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವ ಉತ್ತರಾಖಂಡ ಸರ್ಕಾರ, ವಿಧಾನಸಭೆಯಲ್ಲಿ ಮಂಗಳವಾರ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಯನ್ನು ಮಂಡಿಸಿದೆ.
ಬಿಜೆಪಿ ಮೊದಲಿನಿಂದಲೂ ಸಮಾನ ನಾಗರಿಕ ಸಂಹಿತೆಗಾಗಿ ಆಗ್ರಹಿಸುತ್ತಾ ಬಂದಿತ್ತು, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅದನ್ನು ಅಳವಡಿಸಿಕೊಂಡಿತ್ತು. ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿಯೂ ಸಮಾನ ನಾಗರಿಕ ಸಂಹಿತೆ ತರುವುದಾಗಿ ಭರವಸೆ ನೀಡಲಾಗಿತ್ತು. ಇದಕ್ಕೆ ವಿಧಾನಸಭೆ ಅಂಗೀಕಾರ ನೀಡಿದಲ್ಲಿ, ಸ್ವಾತಂತ್ರ್ಯ ನಂತರ ಯುಸಿಸಿಯನ್ನ ತಂದ ಮೊದಲ ರಾಜ್ಯ ಉತ್ತರಾಖಂಡ ಆಗಲಿದೆ.
ಗೋವಾ ರಾಜ್ಯದಲ್ಲಿ ಪೋರ್ಚುಗೀಸರ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ. ಮದುವೆ, ವಿಚ್ಛೇದನ, ಆಸ್ತಿ ಹಕ್ಕು, ಜೀವನಾಂಶ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದ ಅನೇಕ ವಿಷಯಗಳಲ್ಲಿ ಎಲ್ಲ ಧರ್ಮಗಳಿಗೂ ಒಂದೇ ನಿಯಮದ ಪ್ರಸ್ತಾವವಿದೆ. ಇದು ಜಾರಿಗೊಂಡರೆ, ಶರೀಯತ್ ಪ್ರಕಾರ ಆಸ್ತಿ ಹಂಚಿಕೆ ಇರುವುದಿಲ್ಲ. ಹೀಗಾಗಿ ಮುಸ್ಲಿಮರು ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯಪಟ್ಟಿದೆ.
ಮಸೂದೆಯನ್ನು ಮಂಡಿಸಿದಾಗ ಬಿಜೆಪಿ ಸದಸ್ಯರು ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನಾಲ್ಕು ದಿನಗಳ ಹಿಂದೆ ೭೪೦ ಪುಟಗಳ ಕರಡು ವರದಿಯನ್ನು ಮುಖ್ಯಮಂತ್ರಿ ಧಾಮಿ ಅವರಿಗೆ ಸಲ್ಲಿಸಿತ್ತು.


