ಕಲಬುರಗಿ : ಕಳೆದ ಜನವರಿಯಲ್ಲಿ ಕಲಬುರಗಿ ನಗರದ ಕೊಟನೂರ (ಡಿ) ಬಡಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಲಾಗಿತ್ತು. ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್ ಎಂಬಾತನಿಗೆ ನಿನ್ನೆ ಮಂಗಳವಾರ ಕೋರ್ಟ್ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಸಂಗಮೇಶ್ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್ ದಾಳಿ ಮಾಡಿದೆ.
ಆರೋಪಿ ಕುಟುಂಬಸ್ಥರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಜಖಂಗೊಳಿಸಿದ್ದಾರೆ. ಆರೋಪಿ ಸಂಗಮೇಶ್ ಮನೆಯಲ್ಲದೇ ಬಡಾವಣೆಯಲ್ಲಿರುವ ಇತರೆ ಮನೆಗಳ ಮೇಲೂ ದಾಳಿ ಮಾಡಿದ್ದಾರೆ. ಹಲವು ಬೈಕ್ಗಳ ಜಖಂಗೊಳಿಸಿ, ಕಾರುಗಳ ಗಾಜು ಪುಡಿ ಪುಡಿ ಮಾಡಿದ್ದಾರೆ.
ಆರೋಪಿ ಸಂಗಮೇಶ್ ಮನೆ ಮೇಲೆ ದಾಳಿ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಂಸದ ಡಾ.ಉಮೇಶ್ ಜಾಧವ್ ಸಾಥ್ ನೀಡಿದ್ದರು. ಇದನ್ನೂ ವಿರೋಧಿಸಿ ವೀರಶೈವ ಲಿಂಗಾಯ ಸಮುದಾಯದಿಂದ ಕಲಬುರಗಿ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ಉಮೇಶ್ ಜಾಧವ್ ಅವರು ಗಂಟೆ ಗಟ್ಟಲೆ ಬಿರು ಬಿಸಿಲಿನಲ್ಲಿ ನಿಂತಿದ್ದರು. ಖಡಕ್ ಬಿಸಿಲಿಗೆ ಸುಸ್ತಾಗಿದ್ದ ಜಾಧವ್ ಅವರು ತಳ್ಳಾಟ, ನೂಕಾಟದಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಅಸ್ವಸ್ಥರಾದ ಉಮೇಶ್ ಜಾಧವ್ ಅವರನ್ನು ಬಿಜೆಪಿ ನಾಯಕರು ಆ್ಯಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಪ್ರತಿಭಟನೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಭಾಗಿಯಾಗಿದ್ದ ವೇಳೆ ನೂಕಾಟ ತಳ್ಳಾಟದಲ್ಲಿ ಅಸ್ವಸ್ಥರಾಗಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಜಾಧವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


