ಅಫಜಲಪುರ : ಸಾಧಿಸುವ ಛಲ ಒಂದಿದ್ದರೆ ಯಾವುದೇ ಬಡತನ ಹಾಗೂ ವೈಫಲ್ಯಗಳು ಎದುರಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ಸೂಕ್ತ ಉದಾಹರಣೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಹಟ್ಟಿ ಗ್ರಾಮದ 5ನೇ ತರಗತಿಯಲ್ಲಿ ಓದುತ್ತಿರುವ ಬಡ ರೈತ ಕುಟುಂಬದ ವಿದ್ಯಾರ್ಥಿ ಚಂದ್ರಕಾಂತ ಬಡದಾಳ.
ಬಾಲಕನ ತಂದೆ ರಾಜು ಬಡದಾಳ ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಕೂಲಿ ಕಾರ್ಮಿಕರಾಗಿ ದುಡಿಯಲು ನೆರೆಯ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಗೆ ಕಳೆದ ಹಲವು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಾಗಿ ವಲಸೆ ಹೋಗಿ ಅಲ್ಲಿಯೇ ತಮ್ಮ ಮಗನಿಗೆ ಸಂಕಲ್ಪ ವ್ಯಾಲಿ ಎಂಬ ಶಾಲೆಯಲ್ಲಿ ಶಿಕ್ಷಣಕೊಡಿಸುತ್ತಿದ್ದಾರೆ.ಬಾಲಕನಲ್ಲಿರುವ ಅಪ್ರತಿಮ ಕ್ರೀಡಾ ಪ್ರತಿಭೆ ಗುರುತಿಸಿದ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಪ್ರೋತ್ಸಾಹಿಸಿ ಅಬ್ದುಲ್ ಶೇಖ್ ಎಂಬ ತರಬೇತುದಾರರ ಬಳಿ ಸ್ಕೇಟಿಂಗ್ ತರಬೇತಿ ಕೊಡಿಸಿ ಆತನ ಸಾಧನೆಗೆ ಮತ್ತಷ್ಟು ವೇಗ ನೀಡಿದ್ದಾರೆ.
ಇತ್ತೀಚೆಗೆ ಕಳೆದ 2023ರ ಮೇ 23 ರಿಂದ 31ರವರೆಗೆ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ನಲ್ಲಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಚಂದ್ರಕಾಂತ ಬಡದಾಳ ಕೇವಲ 11.21ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಎಲ್ಲ ಸ್ಪರ್ಧಾಳುಗಳನ್ನು ಹಿಂದಿಕ್ಕೆ ಮೊದಲ ಸ್ಥಾನವನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಗಿನ್ನಿಸ್ ಪುಸ್ತಕದಲ್ಲಿ ಹೆಸರು ಮಾಡಲು ಸಜ್ಜಾಗಿದ್ದಾನೆ
ಬರುವ ಸೆಪ್ಟಂಬರ್ 23 ಹಾಗೂ 24 ರಂದು ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್ನಲ್ಲಿ ಆರ್ಸೆಕ್ ಏಶಿಯಾ ಸ್ಪೀಡ್ ಸ್ಕೇಟಿಂಗ್ ಚಾಲೆಂಜ್ ವತಿಯಿಂದ ಹಮ್ಮಿಕೊಂಡ ಕ್ರೀಡೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು,ಇದೀಗ ಬ್ಯಾಂಕಾಕ್ ತೆರಳಲು ಆರ್ಥಿಕ ಸಂಕಷ್ಟ ಎದುರಾಗಿದೆ.ಹೀಗಾಗಿ ಸರ್ಕಾರ ಹಾಗೂ ದಾನಿಗಳ ನೆರವಿಗೆ ಬರಬೇಕಾಗಿದೆ.
ಆರ್ಥಿಕ ನೆರವಿನ ಹಸ್ತ
ಆಸಕ್ತರು ಹಾಗೂ ದಾನಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿರುವ ಚಂದ್ರಕಾಂತ ತಂದೆ ರಾಜು ಬಡದಾಳ ವಿದ್ಯಾರ್ಥಿಯ ಅಕೌಂಟ್ ನಂ.60452669173 ಹಾಗೂ ಐಎಫ್ಎಸ್ ಸಿ ಕೋಡ್ ಎಂ.ಎ.ಹೆಚ್.ಬಿ 0000447 ಆಗಿದ್ದು ಮೊ.ನಂ 9011163365 ಅಥವಾ 9764656506 ಸಂಪರ್ಕಿಸಲು ಕೋರಲಾಗಿದೆ.
ಕ್ಷೇತ್ರದ ಶಾಸಕ ಎಂವೈ ಪಾಟೀಲ ಮಾತನಾಡಿ ಹೊರ ಜಗತ್ತಿಗೆ ತನ್ನ ಪ್ರತಿಭೆ ತೋರಿದ ವಿದ್ಯಾರ್ಥಿಯ ಸಾಧನೆ ನಮ್ಮ ತಾಲೂಕು ಮತ್ತು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.ಆತನ ಪ್ರತಿಭೆ ಮತ್ತಷ್ಟು ಹೊರಹೊಮ್ಮಲು ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಿ ಅವರ ನೆರವಿಗೆ ಸಹಕರಿಸಲಾಗುವುದು.
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಮಾತನಾಡಿ
ಅಫಜಲಪುರ ತಾಲೂಕಿನ ಒಂದು ಸಣ್ಣ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿ ಸ್ಕೇಟಿಂಗ್ ನಲ್ಲಿ ಉತ್ತಮ ಸಾಧನೆಗೆ ಮಾಡಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಲು ಹೊರಟಿರುವುದು ಅತ್ಯಂತ ಸಂತಸ ತಂದಿದೆ.ಆದರೆ ವಿದ್ಯಾರ್ಥಿಗೆ ಆರ್ಥಿಕ ನೆರವು ಬೇಕಿದ್ದು ನಾನು ಕೂಡ ಕೈಲಾದಷ್ಟು ಸೇವೆ ಮಾಡುತ್ತೇನೆ.ಸರಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಬಾಲಕನಿಗೆ ಬೆಂಬಲಿಸಿದರೆ ದೇಶದ ಕೀರ್ತಿ ಹೆಚ್ಚಿಸುತ್ತಾನೆ ಎಂದರು.