ಧಾರವಾಡ : ಧಾರವಾಡದಲ್ಲಿ ನಡೆದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಹಿಂದಿನ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಮನೆ ಮೇಲೆ ಸಿಬಿಐ (CBI) ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮನೆಯಿಂದ ಚೆನ್ನಕೇಶವ ಅವರು ಪರಾರಿಯಾಗಿದ್ದಾರೆ.
ಧಾರವಾಡದ ಮಲಪ್ರಭಾ ನಗರದಲ್ಲಿರುವ ಚೆನ್ನಕೇಶವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಚೆನ್ನಕೇಶವ ಅವರು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
2016ರ ಜೂನ್ 15 ರಂದು ಯೋಗೇಶ್ ಗೌಡ ಕೊಲೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಟಿಂಗರಿಕರ್ ವಿರುದ್ಧ ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಬಳಿಕ ಧಾರವಾಡ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಟಿಂಗರಿಕರ್, ಎಫ್ಐಆರ್ಗೆ ತಡೆ ತರಲು ಯತ್ನಿಸಿದ್ದರು.
ತನ್ನ ವಿರುದ್ಧ ದಾಖಲಾದ ಎಫ್ಐಆರ್ಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಕಳೆದ ವಾರ ಅರ್ಜಿ ವಜಾಗೊಳಿಸಿತ್ತು. ಅಲ್ಲದೆ, ಜನಪ್ರತಿನಿಧಿಗಳ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಟಿಂಗರಿಕರ್ ಅವರು ಗೈರಾಗಿದ್ದರು. ಹೀಗಾಗಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
ಕೋರ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಚೆನ್ನಕೇಶವ ಟಿಂಗರಿಕರ್ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳ ಟಿಂಗರಿಕರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಟಿಂಕರಿಗರ್ ಮನೆಯಿಂದ ಪರಾರಿಯಾಗಿದ್ದಾರೆ.
ಟಿಂಗರಿಕರ್ ಬಂಧನಕ್ಕೆ ಪ್ಲಾನ್
ಟಿಂಗರಿಕರ್ ಮನೆಯಲ್ಲಿಯೇ ಕುಳಿತು ಟಿಂಗರಿಕರ್ ಬಂಧನಕ್ಕೆ ಸಿಬಿಐ ಅಧಿಕಾರಿಗಳು ಪ್ಲಾನ್ ಮಾಡುತ್ತಿದ್ದಾರೆ. ಟಿಂಗರಿಕರ್ ಮನೆ ಅಕ್ಕಪಕ್ಕದಲ್ಲೇ ಸಂಬಂಧಿಕರು ವಾಸಿಸುತ್ತಿದ್ದು, ಇವರನ್ನೆಲ್ಲ ಒಂದೇ ಮನೆಯಲ್ಲಿ ಸೇರಿಸಿದ್ದಾರೆ. ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸಂಬಂಧಿಕರ ಮನೆಗಳಿಗೂ ಭೇಟಿ ನೀಡಿ ಟಿಂಗರಿಕರ್ಗಾಗಿ ಹುಡುಕಾಟ ನಡೆಸಿದ್ದಾರೆ.
ಜಾಮೀನಿಗೆ ಶ್ಯೂರಿಟಿ ನೀಡಿದ್ದ ವ್ಯಕ್ತಿಗೆ ನೋಟಿಸ್
ಚೆನ್ನಕೇಶ ಅವರಿಗೆ ಜಾಮೀನು ನೀಡುವಾಗ ಶ್ಯೂರಿಟಿ ನೀಡಿದ್ದ ಧಾರವಾಡದ ಉದ್ಯಮಿ ವಾಸು ಕಲಾಲ್ ಅವರಿಗೆ ಸಿಬಿಐ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಟಿಂಗರಿಕರ್ ಮನೆಗೆ ಕರೆಯಿಸಿಕೊಂಡು ಕೋರ್ಟ್ ನೋಟಿಸ್ ನೀಡಲಾಗಿದೆ.


