ಹಾಸನ : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಆಯ್ಕೆಯಾಗಿರುವ ಕನ್ನಡದ ಖ್ಯಾತ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ಜಿಲ್ಲಾಡಳಿತ ಇಂದು ಅಧಿಕೃತವಾಗಿ ಆಹ್ವಾನ ನೀಡಿತು.
ಮೈಸೂರಿನಿಂದ ಆಗಮಿಸಿದ ದಸರಾ ಆಚರಣೆ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಡಾ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವರಾಜ್, ಚಾಮುಂಡಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ ರೂಪಾ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಮೈಸೂರು ಪಾಲಿಕೆ ಆಯುಕ್ತ ತನ್ನಿರ್ ಆಸಿಫ್ ಮೊದಲಾದ ಅಧಿಕಾರಿಗಳ ತಂಡ ಆಗಮಿಸಿ ಬಾನು ಮುಸ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಆನೆ ವಿಗ್ರಹ ನೀಡಿ ಆತ್ಮೀಯವಾಗಿ ಸನ್ಮಾನಿಸಿದ ನಂತರ ದಸರಾ ಆಹ್ವಾನ ಪತ್ರಿಕೆ ನೀಡಿ ತಾವು ಮೈಸೂರಿಗೆ ಆಗಮಿಸಿ, ನಾಡಹಬ್ಬಕ್ಕೆ ಶುಭ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
ಕುಟುಂಬ ಸಮೇತರಾಗಿ ದಸರಾ ಹಬ್ಬಕ್ಕೆ ಬರಬೇಕೆಂದ ಮೈಸೂರು ಡಿ.ಸಿ ಲಕ್ಷ್ಮಿಕಾಂತರೆಡ್ಡಿ ಆಹ್ವಾನಿಸಿದರು. ಈ ಆಹ್ವಾನವನ್ನು ಬಾನು ಮುಸ್ತಾಕ್ ಅವರು ಸಂತೋಷದಿಂದ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಬಾನು ಮುಸ್ತಾಕ್ ಅವರ ಪತಿ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.