ಕಾಂತಾರ’ ಸಿನಿಮಾ ( Kantara Movie ) ಗೆಲ್ಲಲು, ಭೂತಕೋಲದ ದೃಶ್ಯ ಅದ್ಭುತವಾದ ದೃಶ್ಯ ವೈಭವವಾಗಲು ‘ವರಾಹ ರೂಪಂ’ ಹಾಡಿನ ಕೊಡುಗೆ ದೊಡ್ಡದಿದೆ. ಕೇರಳದ ಜನಪ್ರಿಯ ‘ಥೈಕ್ಕುಡಂ ಬ್ರಿಡ್ಜ್’ ಸಂಗೀತ ಬ್ಯಾಂಡ್ ‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡಿನ ವಿರುದ್ಧ ಕೃತಿಚೌರ್ಯದ ದೂರು ದಾಖಲಿಸಿತ್ತು. ಆಗ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ, ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ನ್ಯಾಯಾಲಯವು ‘ಕಾಂತಾರ’ ನಿರ್ಮಾಪಕರಿಗೆ ಎಲ್ಲ ಕಡೆ ಈ ಹಾಡನ್ನು ತೆಗೆಯಬೇಕು ಎಂದು ಹೇಳಿತ್ತು. ಈಗ ಕೆಳ ನ್ಯಾಯಾಲಯದಲ್ಲಿ ‘ಕಾಂತಾರ’ ತಂಡಕ್ಕೆ ಯಶಸ್ಸು ಸಿಕ್ಕಿದೆ.
‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡನ್ನು ಇನ್ನುಮುಂದೆ ಕೇಳಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಈ ಹಾಡಿನ ಬರಹಗಾರ ಶಶಿಧರ್ ಕಾವೂರು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
“ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ ಬ್ರಿಡ್ಸ್ ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ನ್ಯಾಯ ಗೆದ್ದಿದೆ, ಜೈ ತುಳುನಾಡು” ಎಂದು ಶಶಿಧರ್ ಕಾವೂರು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
‘ಕಾಂತಾರ’ ಚಿತ್ರದಲ್ಲಿ ಬಳಸಲಾದ ‘ವರಾಹ ರೂಪಂ’ ಹಾಡನ್ನ ತಮ್ಮ ಒರಿಜಿನಲ್ ಸಾಂಗ್ ‘ನವರಸಂ’ನಿಂದ ನೇರವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು. ಆಗ ಅಜನೀಶ್ ಲೋಕನಾಥ್ ಅವರು, “ನಾನು ಈ ಹಾಡು ಕದ್ದಿಲ್ಲ, ರಾಗಗಳು ಒಂದೇ ಇರುವ ಕಾರಣ ಸಾಮ್ಯತೆ ಸಹಜ ಸ್ಫೂರ್ತಿ ಪಡೆದಿದ್ದೇನೆ” ಎಂದು ಹೇಳಿದ್ದರು.


