ಮಂಗಳೂರು : ಪ್ರವಾದಿ ಮುಹಮ್ಮದರು ಜನಿಸಿ 1500 ವರ್ಷಗಳೇ ಕಳೆದಿವೆ ಮತ್ತು ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿವೆ. ಆದರೆ ಮುಸ್ಲಿಮರ ಧರ್ಮ ಗ್ರಂಥ ಕುರ್ ಆನ್ ಅದರ ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ನಮಾಝ್, ಅದಾನ್ ಇತ್ಯಾದಿಗಳು ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಕುರ್ ಆನಿನ ಬಗ್ಗೆ ಮತ್ತು ಆಚಾರ ವಿಚಾರಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳು ಇರುವುದು ಸಹಜವಾಗಿದೆ. ಆದ್ದರಿಂದಲೇ ಪ್ರವಾದಿ ಜನಿಸಿದ ಈ ತಿಂಗಳಲ್ಲಿ ಅವರ ಸಂದೇಶದ ಪ್ರಮುಖ ಭಾಗವಾಗಿರುವ ಮಸೀದಿಯನ್ನು ಸಾರ್ವಜನಿಕರಿಗೆ ತೆರೆದಿಡಬೇಕು ಎಂದು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ಕುದ್ರೋಳಿ ಆಡಳಿತ ಮಂಡಳಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಜಂಟಿಯಾಗಿ ಮಸೀದಿ ದರ್ಶನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ. ಮಂಗಳೂರು ಈ ಪ್ರದೇಶದ ಕುದ್ರೋಳಿಯಲ್ಲಿರುವ ಜಾಮಿಯಾ ಮಸೀದಿಯನ್ನು ಸೆಪ್ಟೆಂಬರ್ 14ರಂದು ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಸರ್ವಧರ್ಮಿಯ ಸ್ತ್ರೀ ಪುರುಷರಿಗೆ ತೆರೆದಿಡಲು ನಿರ್ಧರಿಸಿದ್ದೇವೆ ಎಂದು ಅಧ್ಯಕ್ಷರಾದ ಜನಾಬ್ ಕೆ.ಎಂ.ಅಶ್ರಫ್ ರವರು ತಿಳಿಸಿದ್ದಾರೆ.
ಈ ಮಸೀದಿ ದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ಭಾಗವಹಿಸುತ್ತಾರೆ. ಹಾಗೆಯೇ ಜಿಲ್ಲೆಯ ಸಂಸದರು, ಕ್ಷೇತ್ರದ ಶಾಸಕರು ಸಹಿತ ವಿವಿಧ ಪ್ರಮುಖರು ಭಾಗವಹಿಸುತ್ತಿದ್ದು ಈ ಸಂದರ್ಭದಲ್ಲಿ ಮಸೀದಿಗೆ ಆಗಮಿಸಿದವರ ಕುತೂಹಲ, ಪ್ರಶ್ನೆ ಮತ್ತು ಜಿಜ್ಞಾಸೆಗಳಿಗೆ ಸೂಕ್ತ ವಿವರಣೆಯನ್ನು ಕೊಡುವ ಏರ್ಪಾಡನ್ನೂ ಮಾಡಿದ್ದೇವೆ. ಮಸೀದಿಯ ಒಳಗೆ ಸ್ತ್ರೀ ಪುರುಷ ಸಹಿತ ಸರ್ವ ಧರ್ಮೀಯರೂ ಬಂದು ಅದರೊಳಗಿನ ಚಟುವಟಿಕೆಗಳನ್ನು ವೀಕ್ಷಿಸಿ ಪ್ರಶ್ನೆಗಳಿದ್ದರೆ ಕೇಳಿ ವಿವರಣೆಯನ್ನು ಪಡಕೊಳ್ಳುವ ಸಂದರ್ಭವಾಗಿ ಇದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಅಧ್ಯಕ್ಷ ಜಮಾಅತೆ ಇಸ್ಲಾಮಿ ಹಿಂದ್ ಜನಾಬ್ CA. ಇಸ್ಲಾಕ್ ಪುತ್ತೂರು, ಕಾರ್ಯದರ್ಶಿ ಜನಾಬ್ ಎಸ್.ಎ. ಖಲೀಲ್, ಸಂಚಾಲಕರು ಜನಾಬ್ ಅಬ್ದುಲ್ ಅಝೀಝ್, ಜನಾಬ್ ಯಾಸೀನ್, ಉಪಾಧ್ಯಕ್ಷರು ಉಪಸ್ಥಿತರಿದ್ದರು.


