ಮಂಗಳೂರು : ಮಂಗಳೂರು ನಗರದ ಲೇಡಿಹಿಲ್ ನ ನಾರಾಯಣ ಗುರು ವೃತ್ತದ ಬಳಿ ಪೆಟ್ರೋಲ್ ಪಂಪ್ ನಲ್ಲಿ ಮಾರುತಿ 800 ಕಾರೊಂದು ಹೊತ್ತಿ ಉರಿದ ಘಟನೆ ಮಧ್ಯಾಹ್ನ 3.30ರ ಸುಮಾರು ನಡೆದಿದೆ.

ಬಜ್ಪೆ ಕಡೆಯಿಂದ ಪೆಟ್ರೋಲ್ ತುಂಬಿಸಲು ಲೇಡಿಹಿಲ್ ಪೆಟ್ರೋಲ್ ಪಂಪ್ ಗೆ ಕಾರು ಬಂದಿದ್ದು, ಪಂಪ್ ಬಳಿ ನಿಲ್ಲುತ್ತಲೇ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಪೆಟ್ರೋಲ್ ಪಂಪನ್ನು ಆವರಿಸಿದ್ದು ಕೂಡಲೇ ಪಂಪ್ ಸಿಬಂದಿ, ಬಕೆಟ್ ಗಳಲ್ಲಿ ನೀರು ಸುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿಯ ಕೆನ್ನಾಲೆ ಹೆಚ್ಚುತ್ತಾ ಹೋಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ವರದಿಯಾಗಿದೆ.ಪಂಪ್ ಅಡಿಭಾಗದಲ್ಲಿರುವ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದರೆ ದುರಂತವೇ ಆಗಿರುತ್ತಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.


