ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಗರದಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರುನಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಏರ್ಪೋರ್ಟ್ ಹೊರಗಡೆ ಕೆಲ ಬಿಜೆಪಿ ಕಾರ್ಯಕರ್ತರು ಅವರ ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಜಮಾಯಿಸಿದ್ದರು.
ನಗರದ ಹೊರವಲಯದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಯುವ ಮೋರ್ಚಾ ಮಂಗಳೂರು ಫೆಬ್ರವರಿ 17 ರ ಶನಿವಾರದಂದು ಬೋಂದೇಲ್ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ಪ್ರತಿಭಟನೆಯನ್ನು ಆಯೋಜಿಸಿತ್ತು.
ಸಿದ್ದರಾಮಯ್ಯ ಹಿಂದೂ ವಿರೋಧಿ, ವಾಪಸ್ಸು ಹೋಗಿ ಅಂತ ಅವರು ಘೋಷನೆಗನ್ನು ಕೂಗುತ್ತಿದ್ದಾಗ, ಪೊಲೀಸರು ಧಾವಿಸಿ ಬಂದು ಅವರನ್ನು ಚದುರಿಸುವ ಪ್ರಯತ್ನ ಮಾಡಿದರು. ಆದರೆ, ಕಾರ್ಯಕರ್ತರು ಅಲ್ಲಿಂದ ಹೋಗಲು ತಯಾರಿರಲಿಲ್ಲ. ಪೊಲೀಸರು ಬಲವಂತದಿಂದ ಹಿಂದೆ ತಳ್ಳಲು ಶುರುಮಾಡಿದಾಗ ಕೊಂಚ ಮೆತ್ತಗಾದ ಪ್ರತಿಭಟನಾಕಾರರು, ಘೋಷಣೆ ಕೂಗದೆ ಶಾಂತಿಯುತವಾಗಿ ಪ್ರದರ್ಶನ ನಡೆಸುತ್ತೇವೆ ಅಂತ ಹೇಳಿದರು. ಅದಕ್ಕೆ ಅವಕಾಶ ನೀಡಿದ ಮಂಗಳೂರು ಪೊಲೀಸರು, ಒಂದೇ ಒಂದು ಮಾತು ಹೊರಬಿದ್ದರೆ ಒಯ್ದು ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಸಿದರು.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತನಾಡಿ ಯಾವುದೇ ಗೊಂದಲವನ್ನು ಉಂಟುಮಾಡದಂತೆ ಅವರಿಗೆ ಸೂಚಿಸಿದರು, ಪ್ರತಿಭಟನೆಗೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಅಥವಾ ನೀಡಲಾಗಿಲ್ಲ ಎಂದು ಒತ್ತಿ ಹೇಳಿದರು. ಸೂಚನೆಗಳ ಹೊರತಾಗಿಯೂ, ಯುವ ಮೋರ್ಚಾ ಸದಸ್ಯರು ಪ್ರದೇಶವನ್ನು ಖಾಲಿ ಮಾಡಲು ನಿರಾಕರಿಸಿದರು, ಪ್ರತಿಭಟಿಸಲು ತಮ್ಮ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದರು ಮತ್ತು ಕಾಂಗ್ರೆಸ್ ಪಕ್ಷದಿಂದ ಗ್ರಹಿಸಿದ ಅನ್ಯಾಯಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಭಟನಾಕಾರರೊಂದಿಗೆ ತೊಡಗಿಸಿಕೊಳ್ಳಲು ಸ್ಥಳಕ್ಕೆ ಆಗಮಿಸಿದರು. ಆದರೆ, ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸ್ ಕಮಿಷನರ್ ಪ್ರತಿಭಟನೆಯಲ್ಲಿ ತೊಡಗಿದ್ದ ಎಲ್ಲ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.


