ಮಂಗಳೂರು : ನಗರದ ಹೃದಯ ಭಾಗವಾದ ಮಿಲಾಗ್ರೀಸ್ ವಾರ್ಡಿನ ಹೈಲಾಂಡ್ಸ್ ಸಿಲ್ವಾ ಲೇನ್ ಪ್ರದೇಶದಲ್ಲಿ ತೆರೆದ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಒಳಚರಂಡಿ ತ್ಯಾಜ್ಯ ನೀರು ನಿರಂತರವಾಗಿ ಹರಿಯುತ್ತಿದ್ದು, ಪರಿಸರ ಮಾಲಿನ್ಯ ಗಂಭೀರ ಮಟ್ಟಕ್ಕೆ ತಲುಪಿದೆ.
ಸ್ಥಳೀಯ ನಿವಾಸಿಗಳ ಆರೋಪದಂತೆ, ಬಹುಮಹಡಿ ಕಟ್ಟಡಗಳಲ್ಲಿ ಸ್ಥಾಪಿತವಾಗಬೇಕಾದ STP (Sewage Treatment Plant) ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ತ್ಯಾಜ್ಯ ನೀರನ್ನು ನೇರವಾಗಿ ತೆರೆದ ಚರಂಡಿಗಳಿಗೆ ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ, ಅಸ್ವಚ್ಛತೆ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಾದರೂ, ಸಮರ್ಪಕ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯಾಗಿಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದೆ.ಈಗಾಗಲೇ ಮಂಗಳೂರು ನಗರದಲ್ಲಿ ಇದೇ ರೀತಿಯ ಸಮಸ್ಯೆಗಳು ಹಲವು ಕಡೆ ವರದಿಯಾಗಿದ್ದು, ಅಪಾರ್ಟ್ಮೆಂಟ್ಗಳಿಂದ ನೇರವಾಗಿ ಡ್ರೈನೇಜ್ ನೀರು ರಾಜಕಾಲುವೆಗೆ ಹರಿಸಲಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ.
ಇತ್ತೀಚೆಗೆ ಅಶುದ್ಧ ಒಳಚರಂಡಿ ನೀರು ನದಿಗಳಲ್ಲಿ ಸೇರಿ, ಮೀನುಗಳ ಸಾವು ಮತ್ತು ನೀರಿನ ಮಾಲಿನ್ಯ ಹೆಚ್ಚಾಗುತ್ತಿರುವುದು ಅಧಿಕಾರಿಗಳ ವರದಿಗಳಲ್ಲಿಯೂ ಬೆಳಕಿಗೆ ಬಂದಿದೆ. ಪರಿಸರ ತಜ್ಞರು ಎಚ್ಚರಿಸಿರುವಂತೆ, ನಿರಂತರವಾಗಿ ಶುದ್ಧೀಕರಿಸದ ನೀರು ಹೊರಬಿಟ್ಟರೆ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯ ಉಂಟಾಗಬಹುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ನಿವಾಸಿಗಳ ಪ್ರಶ್ನೆ ಎತ್ತಿದ್ದು STP ಕಾರ್ಯನಿರ್ವಹಿಸದ ಕಟ್ಟಡಗಳ ವಿರುದ್ಧ ಕ್ರಮ ಯಾಕಿಲ್ಲ? ನಗರಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದು ಏಕೆ? ಆರೋಗ್ಯ ಮತ್ತು ಪರಿಸರ ಇಲಾಖೆ ನಿಷ್ಕ್ರಿಯವಾಗಿರುವುದಕ್ಕೆ ಕಾರಣವೇನು? ಎಂದು ಹೇಳಿದ್ದಾರೆ.
ಈ ಬಗ್ಗೆ STP ಕಾರ್ಯನಿರ್ವಹಿಸದ ಕಟ್ಟಡಗಳನ್ನು ತಕ್ಷಣ ಬಂದ್ ಮಾಡಬೇಕು,ಚರಂಡಿಗೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು,ಜವಾಬ್ದಾರಿಯಿಲ್ಲದ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು ಹಾಗೂ ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಾಣಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ನಗರ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ರೀತಿಯ ನಿರ್ಲಕ್ಷ್ಯವು ಮಧ್ಯಮ ಮತ್ತು ಬಡಜನರ ಜೀವನವನ್ನು ದುಃಖಮಯವಾಗಿಸುತ್ತಿದೆ ಎಂದು ಸಾರ್ವಜನಿಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಈ ದುರಾವಸ್ಥೆಯ ಬಗ್ಗೆ ನಗರಪಾಲಿಕೆಯ ಆಯುಕ್ತರ ಗಮನಕ್ಕೆ ತಂದು 1 ತಿಂಗಳಾದರೂ, ಈವರೆಗೆ ಯಾವನೆ ಅಧಿಕಾರಿಯು ಸ್ಥಳ ತನಿಖೆ ನಡೆಸಿ, ದೂರಿಗೆ ಸ್ಪಂದಿಸಿರುವುದ್ದಿಲ್ಲ,ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ಈ ಕೂಡಲೇ ನೌಕರಿಯಿಂದ ವಜಾಗೊಳಿಸಿ ಮನೆಗೆ ಕಳುಹಿಸಬೇಕೆಂದು ಸಾರ್ವಜನಿಕರು ಸರಕಾರದ ಮುಖ್ಯ ಕಾರ್ಯದರ್ಶಿರವರಿಗೆ ಪತ್ರ ಬರೆದು ಆಕ್ರೋಶವನ್ನು ಹೊರ ಹಾಕಿದ್ದಾರೆ.


