ಮಂಗಳೂರು : ನಗರದಲ್ಲಿ ಸೋಮವಾರ ಸಂಜೆ ಅನೈತಿಕ ಪೊಲೀಸ್ಗಿರಿ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಹಾಗೂ ಯುವತಿಯನ್ನು ಹಿಂಬಾಲಿಸಿದ್ದರು. ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಸವಾರರನ್ನು ವಿಚಾರಣೆ ನಡೆಸಿದ್ದರು.
ಬಂಧಿತರನ್ನು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂದು ತಿಳಿಯಲಾಗಿದೆ.
ಮುಳಿಹಿತ್ಲುವಿನ ಸಂಸ್ಥೆಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದ ಯುವಕ ಮತ್ತು ಯುವತಿ ನ.27ರಂದು ರಾತ್ರಿ 8 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ವಾಪಸ್ ಬರುತ್ತಿದ್ದರು. ಅಂಗಡಿಯೊಂದರಲ್ಲಿ ಮೊಬೈಲ್ ರಿಪೇರಿ ಮಾಡಿಕೊಂಡು ಮಿಲಾಗ್ರಿಸ್ ಚರ್ಚ್ ರಸ್ತೆಯಿಂದ ಭಗಿನಿ ಸಮಾಜದ ಕಡೆಗೆ ಹೋಗುತ್ತಿದ್ದರು. ಅವರನ್ನು ತಡೆದು ಪ್ರಶ್ನಿಸಲಾಯಿತು. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.


