ಮಂಗಳೂರು ; ಕರ್ನಾಟಕ ರಾಜ್ಯದ ಕರಾವಳಿಯಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಈ ನಡುವೆ ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುದಕ್ಕೆ ಆರಂಭವಾಗಿದೆ. ನೇತ್ರಾವತಿ ನದಿಯಲ್ಲಿ ಒಳಹರಿವು ಕುಸಿತವಾಗುತ್ತಿದ್ದು ನಗರದ ಜನರಿಗೆ ಜಲಕ್ಷಾಮದ ಆತಂಕ ಶುರುವಾಗಿದೆ.
ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ನಗರ ಬೆಳೆದಂತೆ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಜನ ಹೆಚ್ಚಾದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಳಕೆಯು ವಿಪರೀತವಾಗಿದ್ದು, ಈ ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗುವ ಆತಂಕ ಶುರುವಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ವೆಂಟೆಂಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಈ ಡ್ಯಾಂನಲ್ಲಿ 6 ಮೀ ನೀರು ನಿಲ್ಲಿಸಲಾಗಿದ್ದು ನೀರಿನ ಮಟ್ಟ ಇಳಿಕೆ ಆರಂಭವಾಗಿ ಒಳಹರಿವು ಕುಸಿತವಾಗಿದೆ. ನೀರಿನ ಮೂಲವಾದ ನೇತ್ರಾವತಿ ನದಿಯಲ್ಲಿ ಒಳಹರಿವು ನಿಂತಿದ್ದರಿಂದ ಈ ಬಾರಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯಾಗುವ ಆತಂಕವಿದೆ. ಒಂದು ವೇಳೆ ಕೊರತೆಯಾದರೆ ಟ್ಯಾಂಕರ್ ಮೂಲಕ ವಾರ್ಡ್ ವಾರ್ಡ್ಗಳಿಗೆ ವಾಟರ್ ರೇಷನಿಂಗ್ ಮಾಡಬೇಕಾದ ಅಗತ್ಯವಿದೆ.
ಮಂಗಳೂರು ನಗರಕ್ಕೆ ದಿನಂಪ್ರತಿ 160 ಎಂ.ಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆ ಕೈಗಾರಿಕೆಗಳಾದ ಎಂಸಿಎಫ್, ಎಂಆರ್ಪಿಎಲ್ ಸೇರಿದಂತೆ ಇತರ ಕೈಗಾರಿಕೆಗಳಿಗೂ ತುಂಬೆ ಹಾಗೂ ಎಎಂಆರ್ ಡ್ಯಾಂನಿಂದ ನೀರು ಪೂರೈಸಲಾಗುತ್ತಿದೆ. ಸದ್ಯ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವ ಚಿಂತನೆ ನಡೆಸಿದ್ದಾರೆ. ಈಗಾಗಲೇ ಪಾಲಿಕೆ ಆಯುಕ್ತರ ನೇತ್ರತ್ವದ ಅಧಿಕಾರಿಗಳ ತಂಡ ಉಪ್ಪಿನಂಗಡಿವರೆಗೆ ತೆರಳಿ ನದಿ ನೀರಿನ ಒಳಹರಿವನ್ನು ಪರಿಶೀಲಿಸಿದೆ. ಕೆಲವೇ ದಿನಗಳಲ್ಲಿ ಮಳೆ ಬಾರದೆ ಇದ್ದರೆ ಮಂಗಳೂರು ನಗರಕ್ಕೆ ಕುಡಿಯುವ ನೀರು ನಿರಂತರ ಸರಬರಾಜು ನಿಲ್ಲಲಿದ್ದು ಈ ಜಲಕ್ಷಾಮ ಎದುರಿಸಲು ಬೇಕಾದ ಸಿದ್ದತೆಯನ್ನು ಪಾಲಿಕೆ ಅಧಿಕಾರಿಗಳು ಮಾಡಿಕೊಳ್ಳುತಿದ್ದಾರೆ ಎಂದು ಬಲ್ಲಾಮೂಲಗಳಿಂದ ಮಾಹಿತಿ .
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಘಟ್ಟಪ್ರದೇಶ ಸೇರಿದಂತೆ ನೇತ್ರಾವತಿ ನದಿ ಪ್ರದೇಶದಲ್ಲಿ ಮಳೆಯಾದರಿಂದ ನೀರಿನ ಕೊರತೆ ನೀಗಿತ್ತು. ಹೀಗಾಗಿ ಈ ಬಾರಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಜನ ಒತ್ತು ನೀಡಬೇಕಾಗಿದೆ. ನೀರನ್ನು ಪೋಲು ಮಾಡದೇ ಮುಂಜಾಗ್ರತೆವಹಿಸಿ ನೀರು ರೇಷನಿಂಗ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕಾಗಿದೆ.
ಮುಂದೊಂದು ದಿನ ನೀರಿಗಾಗಿ ಪರದಾಡುವ ಕಾಲ ಬರುವ ಸಾಧ್ಯತೆ ಇದೆ ಎಂದು ತಜ್ಞರ ಅಭಿಪ್ರಾಯ, ಆದರಿಂದ ನೀರನ್ನು ಮಿತವ್ಯಯ ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಕೂಡ.


