ಮಂಗಳೂರು ; ಅಪರೂಪದ ಪ್ರಕರಣದಲ್ಲಿ ಯಕ್ಷ ಕಲಾವಿದರಿಬ್ಬರು ಜಾತಿನಿಂದನೆ ಆರೋಪದ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದಾರೆ. ಮಂಗಳೂರಿನ ಮಾನ್ಯ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ಮೇಳದ ಪ್ರಸಿದ್ದ ಪ್ರಸಂಗ ಬ್ರಹ್ಮ ಬಲಾಂಡಿ ಎನ್ನುವ ಪ್ರಸಂಗವನ್ನು ಯಕ್ಷ ಕಲಾವಿದ ಸಂಘಟಕ ಪೂರ್ಣೇಶ್ ಎಂಬವರು ಪುರಭವನದಲ್ಲಿ ಸಂಯೋಜಿಸಿದ್ದರು. ಆ ಪ್ರಸಂಗದಲ್ಲಿ ಅದರ ರಚನೆಕಾರರು ಅನಂತರಾಮ ಬಂಗಾಡಿಯವರು ಸೃಷ್ಟಿಸಿದ ಲಾತ್ರಗಳ ಹೆಸರನ್ನು ಯಥಾವತ್ತಾಗಿ ಕರಪತ್ರಗಳಲ್ಲಿ ಮುದ್ರಿಸಿ ಹಂಚಲಾಗಿತ್ತು ಮತ್ತು ಆ ಪಾತ್ರಗಳ ಹೆಸರಿನ ಉಲ್ಲೇಖ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯಿದೆಯ ಅಡಿಯಲ್ಲಿ ಜಾತಿ ನಿಂದನೆ ಎಂದು ದಲಿತ ಸಂಘಟನೆಗಳು ಪೋಲೀಸರಿಗೆ ದೂರು ನೀಡಿದ್ದರು.
ಅದರಂತೆ ಪೋಲೀಸರು ಪೂರ್ಣೇಶ್ ಮತ್ತು ಮಿಜಾರು ತಿಮ್ಮಪ್ಪ ಎಂಬವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಲಮು 3 (1) (r) (u) (s) ರ ಅಡಿಯಲ್ಲಿ ಜಾತಿನಿಂದನೆ ಕೇಸು ದಾಖಲಿಸಿ ಮಾನ್ಯ ಎರಡನೆ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಹಲವಾರು ಸಾಕ್ಷಿಗಳನ್ನು ದೂರುದಾರರು ಹಾಜರುಪಡುಸಿದ್ದರು. ಆ ನಂತರ ಸಂಘಟಕರು ಸದ್ರಿ ಯಕ್ಷಗಾನವನ್ನು ರದ್ದುಪಡಿಸಿ ಬೇರೆ ಪ್ರಸಂಗವನ್ನು ಆಯೋಜಿಸಿದ್ದರು.
ಪ್ರಕರಣದ ಸಮಗ್ರ ತನಿಖೆ ನಡೆದು ವಾದ ಪ್ರತಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.


