ಮಂಗಳೂರು : ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿಯು ನಗರದ ಡಾ. ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ನನ್ ಸೆಂಟರ್ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದ್ದು, ಮುಖ್ಯ ಅತಿಥಿ ಶತಾವಧಾನಿ ಡಾ. ಆರ್. ಗಣೇಶ್ ಮತ್ತು ನಾಡಿನ ಖ್ಯಾತ ಸಾಹಿತಿಗಳಾದ ಡಾ.ಎಸ್.ಎಲ್. ಭೈರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಸಾಹಿತ್ಯೋತ್ಸವದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರಾದ ವಿಕ್ರಮ್ ಸೂದ್, ಭಾರತದ ಮಾಜಿ ರಾಜತಾಂತ್ರಿಕ ಮತ್ತು ಲೇಖಕರಾದ ದಿಲೀಪ್ ಸಿನ್ಹಾ, ಮಾಜಿ ಪೊಲೀಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಅಣ್ಣಾಮಲೈ, ಶತಾವಧಾನಿ ಡಾ. ಆರ್. ಗಣೇಶ್, ಇತಿಹಾಸಕಾರ ಮತ್ತು ಲೇಖಕರಾದ ಡಾ. ವಿಕ್ರಮ್ ಸಂಪತ್, ಜೆಎನ್ಯು ಉಪ ಕುಲಪತಿ ಡಾ. ಶಾಂತಿಶ್ರೀ ದುಲಿಪುಡಿ ಪಂಡಿತ್, ಸ್ವಾಮಿ ಮಹಾಮೇಧಾನಂದ. ಮಿಥಿಕ್ ಸೊಸೈಟಿ ಅಧ್ಯಕ್ಷರಾದ ವಿ. ನಾಗರಾಜ್, ಹಿಮಾಲಯ ಭೌಗೋಳಿಕ ರಾಜಕೀಯ ತಜ್ಞ ಡಾ. ಕ್ಲಾಡ್ ಅರ್ಪಿ, ರಾಜಕೀಯ ತಜ್ಞ, ಮಾಜಿ ಸಂಸದ ಡಾ. ವಿನಯ್ ಸಹಸ್ರಬುದ್ದೆ, ಸಂಸ್ಕೃತ ಕಂಟೆಂಟ್ ಕ್ರಿಯೇಟರ್ ಸಮಷ್ಠಿ ಗುಬ್ಬಿ, ಸಂಸ್ಕೃತ ವಿದ್ವಾಂಸ ಮತ್ತು ಲೇಖಕರಾದ ಡಾ. ಎಚ್. ಆರ್ ವಿಶ್ವಾಸ್, ಸೃಜನಶೀಲ ಶಿಕ್ಷಕಿ ವಂದನಾ ರೈ ಸೇರಿದಂತೆ 60 ಕ್ಕೂ ಅಧಿಕ ಭಾಷಾ ತಜ್ಞರು, ಹಿರಿಯ ಸಾಹಿತಿಗಳು, ಉದಯೋನ್ಮುಖ ಬರಹಗಾರರು, ಲೇಖಕರು, ಯುವ ಕವಿಗಳು, ವಾಗ್ನಿಗಳು ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಲಿಟ್ಫೆಸ್ಟ್ ಗೌರವಕ್ಕೆ ‘ಡಾ. ಬಾಲಸುಬ್ರಮಣ್ಯಂ’ ಅವರನ್ನು ಆಯ್ಕೆ ಮಾಡಲಾಗಿದೆ.
ಅಂಧರಾದ ಒ. ಐಶ್ವರ್ಯ ಹಾಗೂ ಡಾ. ಮಲ್ಲಪ್ಪರವರಿಗೆ ವೇದಿಕೆ ಒದಗಿಸಿದ್ದು ಹಾಗೂ ಈ ಬಾರಿ ವಿಶೆಷವಾಗಿ ಗೊಂದಲಿಗ ಸಮುದಾಯದವರು ಭಾಗವಹಿಸಲಿದ್ದು ಗೊಂದಲಿಗ ಕಥೆ ಹಾಗೂ ಹಾಡನ್ನು ಹಾಡಲಿದ್ದಾರೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆಯಲ್ಲಿ ಒಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವವು ಹೊಂದಿದೆ ಎಂದು ತಿಳಿಸಿದ್ದಾರೆ. ಎರಡು ದಿನಗಳ ಈ ಚಿಂತನ-ಮಂಥನದ ಸಾಹಿತ್ಯ ಉತ್ಸವದಲ್ಲಿ ತಾವೆಲ್ಲರೂ ಭಾಗಿಯಾಗಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುಜಿತ್ ಪ್ರತಾಪ್,ಈಶ್ವರ್ ಶೆಟ್ಟಿ, ಸುನೀಲ್ ಕುಲಕರ್ಣಿ,ದುರ್ಗಾ ರಾಮ್ ದಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


