ಮಂಗಳೂರು : ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಡಾ. ಅರುಣ್ ಅವರು ಕೇವಲ 6 ತಿಂಗಳಲ್ಲಿ ದೊಂಬಿ, ಕೋಮು ಗಲಭೆ, ಮರಳು-ಕೆಂಪುಕಲ್ಲು ಅಕ್ರಮ ಸಾಗಾಟ, ಮಟ್ಕಾ-ಇಸ್ಪೀಟ್ ಅಡ್ಡೆ, ಸ್ಕಿಲ್ ಗೇಮ್, ಮಸಾಜ್ ಪಾರ್ಲರ್, ಮಾದಕ ದ್ರವ್ಯ ಜಾಲ, ಕೋಳಿ ಕಾದಾಟ ಮತ್ತು ಬೆಟ್ಟಿಂಗ್ಗಳಂತಹ ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಜಿಲ್ಲೆಯನ್ನು ಸ್ವಚ್ಛಗೊಳಿಸಿದ್ದಾರೆ.
ಈ ನಿಷ್ಠಾವಂತ ಅಧಿಕಾರಿಗಳು ಬರುವುದರ ಮುಂಚೆ ಜಿಲ್ಲೆಯಲ್ಲಿ ಕೋಮುಗಲಭೆಯಿಂದಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು.ಆದರೆ ದಿನದಿಂದ ದಿನಕ್ಕೆ ಜಿಲ್ಲೆಯನ್ನು ಹತೋಟಿಗೆ ತರುವಲ್ಲಿ ಯಶಸ್ಸುಕಂಡಿದ್ದಾರೆ. ಜಿಲ್ಲೆಯಲ್ಲಿ ತಾಂಡವವಾಗಿರುವ ಬೆಟ್ಟಿಂಗ್-ಮಾಫಿಯಾ ಸಹಿತ ಅಕ್ರಮ ದಂಧೆಗಳನ್ನು ನಡೆಸುತ್ತಿದ್ದ ಗುಂಪುಗಳು ಮತ್ತು ಕೆಲವು ಉದ್ಯಮಿಗಳು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಬೆಂಬಲದೊಂದಿಗೆ, ಈ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ ಹಿರಿಯ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ.
ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ (ಶ್ರೀಕೃಷ್ಣಾಷ್ಟಮಿ, ಗಣೇಶೋತ್ಸವ) ಧ್ವನಿವರ್ಧಕ ನಿಯಮಗಳ ವಿಚಾರದಲ್ಲಿ ನಡೆದ ಪ್ರತಿಭಟನೆಗಳನ್ನು ಆಯುಧವಾಗಿ ಬಳಸಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ನಡೆಯುವ ಸಾಮೂಹಿಕ ವರ್ಗಾವಣೆಯಲ್ಲಿ ಇವರ ಹೆಸರು ಕಾಣದೇ ಇರುವುದು ಮಾಫಿಯಾ ಗುಂಪುಗಳಿಗೆ ನಿರಾಶೆ ತಂದಿದೆ. ಪಶ್ಚಿಮ ವಲಯದ (ಮಂಗಳೂರು ಕಮಿಷನರೇಟ್ ಸೇರಿದಂತೆ) ಕಾನೂನು-ಸುವ್ಯವಸ್ಥೆ ಸ್ಥಿರವಾಗಿರುವುದನ್ನು ಗಮನಿಸಿ ಮುಖ್ಯಮಂತ್ರಿ, ಡಿಜಿಪಿ ಸೇರಿದಂತೆ ಹಿರಿಯ ನಾಯಕರು ಸದ್ಯಕ್ಕೆ ವರ್ಗಾವಣೆಗೆ ಒಪ್ಪದಿರುವುದಾಗಿ ತಿಳಿದುಬಂದಿದೆ. ರೆಡ್ಡಿ ಅವರ ಪದೋನ್ನತಿ 2028 ಜನವರಿಯಲ್ಲಿರುವುದರಿಂದ ಮಧ್ಯಾವಧಿ ವರ್ಗಾವಣೆಯ ಸಾಧ್ಯತೆ ಕಡಿಮೆ ಎಂಬ ಮಾಹಿತಿ ತಿಳಿದುಬಂದಿದೆ.ರಾಜ್ಯ ಗೃಹ ಇಲಾಖೆಯಲ್ಲಿ ಪಶ್ಚಿಮ (ಮಂಗಳೂರು ಕಮಿಷನರೇಟ್ ಸೇರಿದಂತೆ) ಐಜಿಪಿ ವಲಯ ಸೂಕ್ಷ್ಮ ವಲಯವಾಗಿದ್ದು, ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಈ ಕಾರಣದಿಂದ ಯಾವುದೇ ಅಧಿ ಕಾರಿಗಳನ್ನು ಸದ್ಯದ ಮಟ್ಟಿಗೆ ವರ್ಗಾವಣೆ ಮಾಡದಿರಲು ಸಿಎಂ, ಡಿಜಿ ಸೇರಿದಂತೆ ಹಿರಿಯ ನಾಯಕರು, ಅಧಿ ಕಾರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.


