ಬೈಲಹೊಂಗಲ : ಆಸ್ತಿ ಆಸೆಗೆ ಅಪ್ರಾಪ್ತ ಮಗಳನ್ನು ಮಾನಸಿಕ ಅಸ್ವಸ್ಥನಿಗೆ ಮದುವೆ ಮಾಡ ಹೊರಟ ಪತಿಯನ್ನು ವಿರೋಧಿಸಿದ ಪತ್ನಿಯ ಕೈಕಾಲನ್ನೇ ಮುರಿದುಹಾಕಿರುವ ಘಟನೆ ಹಾರೂಗೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾಯವ್ವ ಕರೆನ್ನವರ ಹಲ್ಲೆಗೊಳಗಾದ ಮಹಿಳೆ. ಬೀರಪ್ಪ ಕರೆನ್ನವರ ಹಲ್ಲೆ ಮಾಡಿದ ಕಿರಾತಕ ಪತಿ. ಹದಿನೈದು ವರ್ಷಗಳ ಹಿಂದೆ ಮದುವೆ ಆಗಿದ್ದ ಮಾಯವ್ವ ಮತ್ತು ಬೀರಪ್ಪ ಜೋಡಿಗೆ ಮೂವರು ಮಕ್ಕಳಿದ್ದು, ಅದರಲ್ಲಿ ಇಬ್ಬರು ಗಂಡು, ಓರ್ವ ಹೆಣ್ಣು ಮಗಳು ಇದ್ದಾರೆ. ಹಾರೂಗೊಪ್ಪ ಗ್ರಾಮದಲ್ಲಿಯೇ ಬೀರಪ್ಪನ ಸಹೋದರ ಸಂಬAಧಿ ಹುಡುಗನೊಬ್ಬನಿದ್ದು, ಮಾನಸಿಕ ಅಸ್ವಸ್ಥನಿದ್ದಾನೆ. ಆದರೆ ಆತನಿಗೆ, 40 ಎಕರೆ ಜಮೀನು ಇದೆಯಂತೆ. ಹೀಗಾಗಿ ಆ 40 ಎಕರೆ ಜಮೀನಿಗಾಗಿ ತನ್ನ 13 ವರ್ಷದ ಮಗಳನ್ನೇ ಮದುವೆ ಮಾಡಿಕೊಡಲು ಬೀರಪ್ಪ ಮುಂದಾಗಿದ್ದಾನೆ.
ಇದನ್ನು ವಿರೋಧಿಸಿದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕಟ್ಟಿಗೆಯಿಂದ ಮನಬAದAತೆ ಥಳಿಸಿ ಹೆಂಡತಿ ಕೈ ಕಾಲು ಮುರಿದು ಹಾಕಿದ್ದಲ್ಲದೇ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ. ಸದ್ಯ ಆಕೆಗೆ ಬೈಲಹೊಂಗಲ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲ್ಯವಿವಾಹ ಬೇಡ, ಮಗಳು ಚಿಕ್ಕವಳಿದ್ದಾಳೆ, ಚೆನ್ನಾಗಿ ಓದಿಸೋಣ ಎಂದ ಹೆಂಡತಿ ಕೈಕಾಲು ಮುರಿದು ಹಾಕಿರುವ ಪತಿ ಬೀರಪ್ಪ ಮದುವೆ ಆದಾಗಿನಿಂದಲೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಪ್ರಾಪ್ತ ಮಗಳ ಮದುವೆಗೆ ಆತನಿಗೆ ಸಹೋದರ ಈರಪ್ಪ, ತಂದೆ ಮಲ್ಲಪ್ಪ ಹಾಗೂ ಬೀರಪ್ಪನ ತಾಯಿ ಸೆದೆಮ್ಮ ಹಾಗೂ ಹುಡುಗನ ತಂದೆ ಸಂಗಪ್ಪ ಸಂಕಣ್ಣ ಸಾಥ್ ಕೊಟ್ಟಿದ್ದಾರೆ ಎಂದು ಮಾಯವ್ವ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದಕ್ಕೆ ನೇರವಾಗಿ ನನ್ನ ಗಂಡನ ಸಹೋದರ, ಅತ್ತೆ, ಮಾವ ಕಾರಣವಾಗಿದ್ದು ಅವರ ವಿರುದ್ಧವೂ ಕಠಿಣ ಕ್ರಮವಾಗಬೇಕು ಎಂದಿದ್ದಾಳೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


