ಬೆಳಗಾವಿ : ಕಳೆದ ಒಂದು ವಾರದಿಂದ ನೀರಿನಲ್ಲಿ ಬಿದ್ದು ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು ರಾಜ್ಯವನ್ನೇ ಬೆಚ್ಚಿಬೀಳಿಸಿದಂತಾಗಿದೆ. ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ ಬಸ್ತವಾಡೆ ಅಣೆಕಟ್ಟಿನಲ್ಲಿ ವೇದಗಂಗಾ ನದಿಯಲ್ಲಿ ನಡೆದಿದೆ.
ಜಿತೇಂದ್ರ ವಿಲಾಸ್ ಲೋಕ್ರೆ (36), ರೇಷ್ಮಾ ದಿಲೀಪ್ ಏಳಮಲ್ಲೆ (34), ಸವಿತಾ ಅಮರ್ ಕಾಂಬಳೆ (27), ಯಶ್ ದಿಲೀಪ್ ಏಳಮಲ್ಲೆ (17) ಮೃತ ದುರ್ದೈವಿಗಳು. ಮೃತರಲ್ಲಿ ಇಬ್ಬರು ಬೆಳಗಾವಿಯ ಅಥಣಿ ತಾಲೂಕಿನವರು ಎಂದು ತಿಳಿದುಬಂದಿದೆ.
ಈ ನಾಲ್ವರು ಆನೂರು ಗ್ರಾಮದಲ್ಲಿ ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದರು. ಬಟ್ಟೆ ತೊಳೆಯಲು ನದಿಗೆ ಹೋದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಆನೂರು ಗ್ರಾಮದಲ್ಲಿನ ಅತಿಥಿ ಗೃಹದಲ್ಲಿ ತಂಗಿದ್ದರು. ಬೆಳಿಗ್ಗೆ ಪಕ್ಕದ ಗ್ರಾಮ ಬಸ್ತೆವಾಡದಲ್ಲಿನ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಇಬ್ಬರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾರೆ. ಇವರನ್ನು ಕಾಪಾಡಲು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಿತೇಂದ್ರ ವಿಲಾಸ್ ಲೋಕ್ರೆ, ಸವಿತಾ ಅಮರ್ ಕಾಂಬಳೆ, ರೇಷ್ಮಾ ದಿಲೀಪ್ ಮೃತದೇಹಗಳು ಪತ್ತೆಯಾಗಿದ್ದು, ಯಶ್ ದಿಲೀಪ್ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.


