ಬೆಳಗಾವಿ ; ಬೈಲಹೊಂಗಲ ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಡಿ.4ರಿಂದ 8ರವರೆಗೆ ನೆರವೇರಲಿದ್ದು, ಮಹಾರಥದ ಕಳಸಾರೋಹಣ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಪ್ರಮುಖ ಬಜಾರ ರಸ್ತೆಯ ಜವಳಿ ಕೂಟದಲ್ಲಿ ದಸರಾ ಹಬ್ಬದಂದು ತಂದು ನಿಲ್ಲಿಸಿದ್ದ ರಥದ ಚಕ್ರಕ್ಕೆ ದೀಪಾವಳಿ ಬಲಿಪಾಡ್ಯಯಂದು ದೇವಸ್ಥಾನ ಆವರಣದಿಂದ ಮೆರವಣಿಗೆ ಮೂಲಕ ರಥದ ಸಾಮಗ್ರಿಗಳನ್ನು ತಂದು ರಥ ಕಟ್ಟಲಾಗಿತ್ತು. ಬಡಿಗೇರ ಕುಟುಂಬದ ನುರಿತ ಹಿರಿಯ ಕಲಾವಿದರು ರಥದ ಸಾಮಗ್ರಿಗಳನ್ನು ಜೋಡಿಸಿ 80 ಅಡಿ ಎತ್ತರದ ರಥ ಸಿದ್ಧಗೊಳಿಸಿದರು.
ಕಳಸಾರೋಹಣ ಕಣ್ತುಂಬಿಕೊಂಡ ಜನರು:
ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಲ್ಲ ಕಾರ್ಮಿಕರು, ದೇವಸ್ಥಾನ ಸಮಿತಿಯವರು ಶ್ರದ್ಧೆ, ಭಕ್ತಿಯಿಂದ ರಥದ ಕಳಸಾರೋಹಣ ಮಾಡಿದರು. ಕಲಾ ಶಾರದೆ ಸಂಕೇತವಾಗಿರುವ ನವೀಲಿನ ಕಳಶಕ್ಕೆ ವಾಡಿಕೆಯಂತ ಜವಳಿ, ಯಾತಗೇರಿ, ಹೂಲಿ, ಮೆಟಗುಡ್ಡ, ಬಿಳ್ಳೂರ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಬಂಗಾರದ ಪರಪರಿ ಲೇಪಿತದ ಕಳಶ ತೇರಿಗೆ ಏರುತ್ತಿದ್ದಂತೆ ಭಕ್ತರು ಹರಹರ ಮಹಾದೇವ, ಮರಡಿ ಬಸವೇಶ್ವರ ಮಹರಾಜಕೀ ಜೈ ಎಂದು ಘೋಷಣೆ ಕೂಗಿದರು. ನವೀಲಿನ ಕಳಸಾರೋಹವನ್ನು ನೋಡುಗರು ಕಣ್ತುಂಬಿಕೊಂಡರು.


