ಬೆಂಗಳೂರು : ವಿಧಾನಸಭೆಯ ಹೊರಗೆ ಗದ್ದಲದ ನಂತರ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಕುಸಿದು ಬಿದ್ದ ಬಿಜೆಪಿ ಹಿರಿಯ ಶಾಸಕ ಬಸವನಗೌಡ ಯತ್ನಾಳ್ರನ್ನು ಕನ್ನಿಂಗ್ಹ್ಯಾಂ ರಸ್ತೆಯಲ್ಲಿರೋ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಸವಕಲ್ಯಾಣ ಶಾಸಕ ಶರಣು ಸಲಗಾರ ಅವರು, ಸದನದ ಹೊರಗಡೆ ಬರ್ತಿರುವಾಗ ತಿಕ್ಕಾಟ ಆಯ್ತು. ಮಾರ್ಷಲ್ ಗಳು ನಮ್ಮ ಮೇಲೆ, ನಮ್ಮ ನಾಯಕರ ಮೇಲೆ ದಬ್ಬಾಳಿಕೆ ಮಾಡಿದರು. ಈ ವೇಳೆ ಬಸವನಗೌಡ ಯತ್ನಾಳ್ ಅವರು ಕುಸಿದು ಬಿದ್ದಿದ್ದಾರೆ ಎಂದು ತಿಳಿಸಿದರು. ಯತ್ನಾಳ್ ಪ್ರಜ್ಞೆ ಕಳೆದುಕೊಂಡು ಕೆಳಗೆ ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಲ್ಲದೇ, ತಿಕ್ಕಾಟದಲ್ಲಿ ಯತ್ನಾಳ್ ಅವರು ದೈಹಿಕವಾಗಿ ಅಸ್ವಸ್ಥತರಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದೀವಿ, ವೈದ್ಯರ ಬಳಿ ಮಾತನಾಡಿದ್ದು, ಯತ್ನಾಳ್ ಆರೋಗ್ಯ ಸ್ಥಿರವಾಗಿದೆ, ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ಹಂಚಿಕೊಂಡರು. ಬಿಪಿ ಹಠಾತ್ತನೇ ಹೆಚ್ಚಳ ಆಗಿರುವ ಕಾರಣ ಸುಸ್ತಾಗಿ ಕುಸಿದಿದ್ದಾರೆ. ಅವರಿಗೆ ಶುಗರ್ ಕೂಡ ಇರೋದರಿಂದ ಹೆಚ್ಚಿನ ಕೇರಿಂಗ್ ಅಗತ್ಯವಾಗಿದೆ. ಹೀಗಾಗಿ ಐಸಿಯೂನಲ್ಲಿ ಇಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಗೆ ಐಸಿಯೂನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು. ಅವರ ಅಸಭ್ಯ ವರ್ತನೆಗೆ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡಿರುವ ಶಾಸಕರಲ್ಲಿ ಸಿಎನ್ ಅಶ್ವಥ್ ನಾರಾಯಣ, ವಿ ಸುನೀಲ್ ಕುಮಾರ್, ಆರ್ ಅಶೋಕ, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ್ ಕೋಟಿಯಾನ್, ಅರವಿಂದ್ ಬೆಲ್ಲದ್, ಆರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಸೇರಿದ್ದಾರೆ.


