ಬೆಂಗಳೂರು : ಕರ್ನಾಟಕ ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್) ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ನೀಡಲು ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗಷ್ಟೆ ಪ್ರತಿ ಲೀಟರ್ ಹಾಲಿಗೆ 3 ರೂ. ಏರಿಕೆ ಮಾಡಿದ್ದ ಕೆಎಂಎಫ್ ಈಗ ಮತ್ತೆ ಹಾಲಿನ ದರ ಏರಿಕೆ ಮಾಡುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದೆ.
ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಅಧಿವೇಶನದಿಂದ ಮುಖ್ಯಮಂತ್ರಿಗಳು ಬೆAಗಳೂರಿಗೆ ಬಂದ ಕೂಡಲೇ ಆರ್ಥಿಕ ನಷ್ಟ ಅನುಭವಿಸುತ್ತಿರುವ ಕುರಿತು ಮನವರಿಕೆ ಮಾಡಿಕೊಟ್ಟು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 5 ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದೆ.
ಕಳೆದ ಆಗಸ್ಟ್ ಒಂದರಿAದ ಪ್ರತಿ ಲೀಟರ್ಗೆ ಮೂರು ರೂಪಾಯಿ ಏರಿಕೆ ಆಗಿತ್ತು. 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಿದ್ದಕ್ಕೆ ೩ ರೂಪಾಯಿ ಏರಿಕೆ ಮಾಡಲಾಗಿತ್ತು.ಆದರೆ ಒಕ್ಕೂಟಗಳಿಂದ ದರ ಏರಿಕೆ ಆದ್ರೂ ಒಕ್ಕೂಟಗಳ ನಷ್ಟ ಇನ್ನೂ ಸರಿದೂಗಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡಿ ಎಂದು ಒಕ್ಕೂಟಗಳು ಪಟ್ಟು ಹಿಡಿದಿವೆ. ಅಲ್ಲದೆ ಕ್ಷೀರ ಭಾಗ್ಯ ಯೋಜನೆಯಡಿ ಕೆಎಂಎಫ್ ಪೂರೈಸುತ್ತಿರುವ ಹಾಲಿನ ಪುಡಿ ದರ ಪ್ರತಿ ಕೆಜಿಗೆ 400 ಹಾಗೂ ಜಿಎಸ್ಟಿ ನೀಡಲು ಮನವಿ ಮಾಡಲಾಗಿದೆ. ಈಗ 300 ಮತ್ತು ಜಿಎಸ್ಟಿ ನೀಡಲಾಗುತ್ತಿದೆ.
ಇದರಿಂದ ನಷ್ಟವಾಗುತ್ತಿದೆ ಎಂದು ಕೆಎAಎಫ್ ತಿಳಿಸಿದೆ. ಇನ್ನು ಹಾಲು ಉತ್ಪಾದಕರ ಒಕ್ಕೂಟ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ನೀಡಿ ಹಾಲಿನ ದರ ಏರಿಕೆ ಮಾಡಲೇಬೇಕು. ಇಲ್ಲವಾದಲ್ಲಿ ನಷ್ಟ ಅನುಭವಿಸುವಂತಾಗುತ್ತದೆ. ಅಮೂಲ್ ಕಳೆದ 10 ತಿಂಗಳಲ್ಲಿ ಲೀಟರ್ಗೆ 12 ರೂ. ದರ ಏರಿಕೆ ಮಾಡಿದೆ. ಕೆಎಂಎಫ್ ೩ ರೂ. ಮಾತ್ರ ಹೆಚ್ಚಳ ಮಾಡಿದೆ. ಹೀಗಾದರೆ ನಷ್ಟದಿಂದ ಹೊರಗೆ ಬರುವುದು ಯಾವಾಗ ಎಂದು ಒಕ್ಕೂಟ ಪ್ರಶ್ನೆ ಮಾಡಿದೆ. ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು.
ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.


