ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಹಳಿ ಮೇಲೆ ಜಿಗಿದಿರುವಂತಹ ಘಟನೆ ಜಾಲಹಳ್ಳಿ ಮೆಟ್ರೋ ಸ್ಟೇಷನ್ನಲ್ಲಿ ನಡೆದಿದೆ.
ಪ್ರಸ್ತುತ ಯುವಕನ ಸ್ಥಿತಿ ಗಂಭೀರವಾಗಿದ್ದು, ಆ್ಯಂಬುಲೆನ್ಸ್ನಲ್ಲಿ ಮೆಟ್ರೋ ಸಿಬ್ಬಂದಿಗಳು ಕರೆದೊಯ್ದು ಯಶವಂತಪುರದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ . ಕೆಲಕಾಲ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದು . ಇದರ ಪರಿಣಾಮ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಜನರು ಪರದಾಡಿದ್ದಾರೆ.
ಯಶವಂತಪುರದಿಂದ ನಾಗಸಂದ್ರವರೆಗೆ ಮೆಟ್ರೋ ರೈಲು ಸಂಚಾರ ಮಾಡುತ್ತಿಲ್ಲ. ಸದ್ಯ ಮೆಜಸ್ಟಿಕ್ನಿಂದ ಯಶವಂತಪುರವರೆಗೆ ಮಾತ್ರ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು,ಅರ್ಧ ಗಂಟೆಯಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟ್ರೋ ಹಳಿಗಳ ಪಕ್ಕದಲ್ಲಿ 750 ವೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗಿರುತ್ತದೆ. ಹಾಗಾಗಿ ಮತ್ತೆ ಪವರ್ ಜನರೇಟ್ ಮಾಡಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊ ಹಳಿಗೆ ಧುಮುಕಿದ ಯುವಕನ ಹೆಸರು ಶ್ಯಾರೊನ್ (23). ಕೇರಳ ಮೂಲದವನು. ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ. ಮೆಜೆಸ್ಟಿಕ್ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಶ್ಯಾರೊನ್ ಧುಮುಕಿದ್ದು, ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದೆ.
ಅಬ್ಬಿಗೆರೆ ಬಳಿ ಐಟಿಐ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯವರೇ ರೂಂ ಸಹ ಮಾಡಿಕೊಟ್ಟಿದ್ದರು. ಇಂದು ಸಂಜೆ ಸ್ನೇಹಿತನ ಜೊತೆ ಬಂದು ಉದ್ದೇಶಪೂರ್ವಕವಾಗಿ ಹಳಿಗೆ ಧುಮುಕಿದ್ದಾನೆ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದು, ಸಪ್ತಗಿರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೀಣ್ಯ ಪೊಲೀಸರು ತನಿಖೆ ನಡೆಸಿದ್ದಾರೆ.


