ಬೆಂಗಳೂರು ; ಬಿಸಿಲಿನ ಬೇಗೆ ಕಡಿಮೆಯಾಗಿದ್ದು ರಾಜ್ಯದ ಹಲವೆಡೆ ಮಳೆರಾಯ ಈಗಾಗಲೇ ತಂಪೆರೆದಿದ್ದಾನೆ.ರಾಜ್ಯದ ಹಲವೆಡೆ ಕೊಂಚ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದ ವರುಣದೇವ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರಂತರವಾಗಿ ಆರ್ಭಟಿಸ್ತಿರೋ ಮೇಘರಾಜ ಮುಂದಿನ 5 ದಿನಗಳ ಕಾಲ ಯೆಲ್ಲೋ, ಅರೆಂಜ್ ಅಲರ್ಟ್ಗೆ ಕಾರಣವಾಗಿದ್ದಾನೆ.
ಮಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ವಾಹನ ಸವಾರರು ನದಿಯಂತಾದ ರಸ್ತೆಯಲ್ಲೇ ಒದ್ದಾಡಿದ್ದಾರೆ. ಇತ್ತ ಬೀದರ್ನಲ್ಲಿ ಗಾಳಿ ಸಹಿತ ಆರ್ಭಟಿಸಿದ ಮಳೆಗೆ ಬೃಹತ್ದಾಕಾರದ ಮರಗಳು ಧರೆಗುರುಳಿದ್ದು, ಹಲವು ವೆಹಿಕಲ್ಸ್ ಕಂಪ್ಲೀಟ್ ಜಖಂಗೊಂಡಿದೆ.
ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಊತ್ತರ ಒಳನಾಡಿನ ಕೆಲ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬೆಳಗಾವಿಯಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲಿಯಸ್ ಇರಲಿದೆ.
ಆರೆಂಜ್ ಅಲರ್ಟ್
ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.
ಜೂನ್ 27ರವರೆಗೆ ಮೀನುಗಾರರಿಗೆ ಎಚ್ಚರಿಕೆ
ಜೂನ್ 27 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ


