ಬೆಂಗಳೂರು: ಗ್ರಾಹಕರಿಗೆ ಒಂದಲ್ಲಾ ಒಂದು ವಸ್ತುವಿನ ದರ ಹೆಚ್ಚಳವಾಗುತ್ತಲೇ ಇದ್ದು ಈಗ ಬೆಳ್ಳುಳ್ಳಿ ದರ 300 ರೂ. ಗಡಿ ದಾಟಿದೆ. ಶುಂಠಿ ಬೆಲೆ ದುಬಾರಿಯಾಗಿ ಕೊಂಚ ಇಳಿಮುಖವಾದ ನಂತರ ಟೊಮೊಟೊ ಬೆಲೆ ಹೆಚ್ಚಳವಾಗಿತ್ತು. ಈರುಳ್ಳಿ ಬೆಲೆ ಹೆಚ್ಚಳವಾಗುವ ಆತಂಕದಲ್ಲಿರುವ ಗ್ರಾಹಕರಿಗೆ ಬೆಳ್ಳುಳ್ಳಿ ಬೆಲೆ ಗಗನಕುಸುಮವಾಗಿ ಕಂಡಿದೆ. ಒಂದು ತಿಂಗಳ ಹಿAದೆ ಕೆ.ಜಿ.ಗೆ 100 ರಿಂದ 120 ರೂ.ಗೆ ಸಿಗುತ್ತಿದ್ದ ಬೆಳ್ಳುಳ್ಳಿ ಈಗ ದುಬಾರಿ ಎನಿಸಿದೆ.
ಭಾರತದ ಕೆಲವು ಭಾಗಗಳಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಅಕಾಲಿಕ ಮಳೆಯು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಬೆಳೆಗಳನ್ನು ನಾಶಮಾಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಕೊರತೆ ಉಂಟಾಗಿದೆ. ಇದರಿಂದ ಬೆಲೆ ದ್ವಿಗುಣವಾಗಿದೆ.
ಈರುಳ್ಳಿ ಪೂರೈಕೆಯಲ್ಲಿ ಕೊರತೆಯ ಬಳಿಕ ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ. ಕೇಂದ್ರವು ಬೆಲೆ ಇಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದರಗಳು ರಿಟೇಲ್ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಇನ್ನು ಅಗತ್ಯ ಹಣ್ಣುಗಳು ಮತ್ತು ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ.
ಎಪಿಎಂಸಿ ವ್ಯಾಪಾರಿಗಳ ಪ್ರಕಾರ ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಶೀಘ್ರವೇ ಸುಧಾರಿಸುವ ಸಾಧ್ಯತೆಯಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮಹಾರಾಷ್ಟ್ರದಲ್ಲಿ ಕಳಪೆ ಬೆಳೆಗೆ ಕಾರಣವಾಗಿವೆ. ಆದರೆ ದಕ್ಷಿಣದ ರಾಜ್ಯಗಳಿಂದ ಸರಬರಾಜು ಕಡಿಮೆಯಾಗಿದೆ.
ಪಶ್ಚಿಮ ರಾಜ್ಯದ ಎಪಿಎಂಸಿ ಸಗಟು ಯಾರ್ಡ್ಗಳು ಈಗ ಬೆಳ್ಳುಳ್ಳಿಯನ್ನು ಕೆಜಿಗೆ 150-250 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಆ ಪ್ರದೇಶಗಳಲ್ಲಿ ಬೆಳ್ಳುಳ್ಳಿ ರಿಟೇಲ್ ಬೆಲೆಗಳು ಪ್ರತಿ ಕೆಜಿಗೆ 300-400 ರೂಪಾಯಿಗೆ ತಲುಪಿದೆ.
ಈಗಾಗಲೇ ಈರುಳ್ಳಿ, ಟೊಮೆಟೊ ಬೆಲೆ ಹೆಚ್ಚಾದ್ದಂತೆ ಮನೆಯಲ್ಲಿ ತಯಾರಿಸಿದ ಒಂದು ಪ್ಲೇಟ್ ಊಟದ ದರವೂ ಏರಿಕೆಯಾಗಿದೆ. ಈಗ ಈ ಬೆಲೆ ಏರಿಕೆಗೆ ಬೆಳ್ಳುಳ್ಳಿಯು ತನ್ನ ಕೊಡುಗೆಯನ್ನು ಕೂಡಾ ನೀಡಿದೆ. ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ವೆಚ್ಚವು ಕ್ರಮವಾಗಿ ತಿಂಗಳಿಗೆ ಶೇಕಡ 10 ರಷ್ಟು ಮತ್ತು ಶೇಕಡ 5 ರಷ್ಟು ಹೆಚ್ಚಳವಾಗಿದೆ.


