ಬೆಂಗಳೂರು ; ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿರುವುದು ಗ್ರೀನ್ಪೀಸ್ ಇಂಡಿಯಾ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ. ಹಸಿರಿಗೆ ಹೆಸರಾಗಿರುವ ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಎಂದು ಗ್ರೀನ್ಪೀಸ್ ಸಂಶೋಧನಾ ವರದಿ ತಿಳಿಸಿದೆ.
ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟವು ಅಪಾಯಕಾರಿ ಮಟ್ಟಕ್ಕೆ ಹದಗೆಟ್ಟಿದೆ, ಮಾಲಿನ್ಯವನ್ನು ಕಡಿಮೆ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಿವಾಸಿಗಳಿಗೆ ಗಮನಾರ್ಹ ಆರೋಗ್ಯ ಅಪಾಯವನ್ನುಂಟುಮಾಡುತ್ತದೆ ಎಂದು ವರದಿ ಎಚ್ಚರಿಸಿದೆ. ಪರಿಣಾಮವಾಗಿ, ಹಿತಕರವಾದ ಹವಾಮಾನ ಮತ್ತು ಮಾಲಿನ್ಯ ಮುಕ್ತ ಪರಿಸರದಿಂದಲೇ ಗುರುತಿಸಿಕೊಂಡಿರುವ ಕರ್ನಾಟಕಕ್ಕೆ ಈ ವಿಚಾರದಲ್ಲಿ ತುಸು ಹಿನ್ನಡೆಯಾದಂತಾಗಿದೆ.
ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ಬೆಂಗಳೂರು, ಮೈಸೂರು ಮತ್ತು ಪುದುಚೇರಿಗಳ ವಾಯು ಗುಣಮಟ್ಟದ ಬಗ್ಗೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ದಕ್ಷಿಣ ಭಾರತದ 10 ಪ್ರಮುಖ ನಗರಗಳಲ್ಲಿ ಸರಾಸರಿ ಪಿಎಂ2.5 ಮತ್ತು ಪಿಎಂ10 (ಇವು ಗಾಳಿಯಲ್ಲಿರುವ ದೂಳು ಮತ್ತು ಅಪಾಯಕಾರಿ ಕಣಗಳನ್ನು ನಿರ್ಧರಿಸುವ ಮಾಪಕಗಳಾಗಿವೆ) ಮಟ್ಟ ಹೆಚ್ಚುತ್ತಲೇ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಮೀರಿದೆ. ಇದು ಆರೊಗ್ಯದ ವಿಚಾರದಲ್ಲಿ ಆತಂಕ ಸೃಷ್ಟಿಸಿದೆ ಎಂದು ಗ್ರೀನ್ಪೀಸ್ ಇಂಡಿಯಾದ ಇತ್ತೀಚಿನ ವರದಿ, ‘ಸ್ಪೇರ್ ದಿ ಏರ್-2’ನಲ್ಲಿ ಉಲ್ಲೇಖಿಸಲಾಗಿದೆ.
WHO ಮಾನದಂಡಗಳಿಗೆ ಹೋಲಿಸಿದರೆ, ಮಂಗಳೂರು ಸೇರಿದಂತೆ ಐದು ನಗರಗಳಲ್ಲಿ PM 2.5 ಮಟ್ಟವು ಐದರಿಂದ ಏಳು ಪಟ್ಟು ಹೆಚ್ಚಾಗಿದೆ, ಆದರೆ ಬೆಂಗಳೂರು, ಮೈಸೂರು ಮತ್ತು ಪಾಂಡಿಚೇರಿಯಂತಹ ನಗರಗಳಲ್ಲಿ PM 10 ಮಟ್ಟವು ಶಿಫಾರಸು ಮಾಡಿದ ಮಿತಿಗಳಿಗಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ ಎಂದು ಗ್ರೀನ್ಪೀಸ್ ಇಂಡಿಯಾ ತಿಳಿಸಿದೆ.ನಮ್ಮ ನಗರಗಳಲ್ಲಿ ಹೆಚ್ಚುತ್ತಿರುವ PM 2.5 ಮತ್ತು PM 10 ಮಟ್ಟಗಳು ವಾಯು ಮಾಲಿನ್ಯದ ಕಠೋರ ವಾಸ್ತವತೆಯನ್ನು ಬಹಿರಂಗಪಡಿಸುತ್ತವೆ ಎಂದು ಹೇಳಿದೆ.
ಗ್ರೀನ್ಪೀಸ್ ಇಂಡಿಯಾ, ಲಾಭರಹಿತ ಮತ್ತು ಪರಿಸರ ಸ್ನೇಹಿ ಸಂಸ್ಥೆ, ಸುಸ್ಥಿರ ಅಭ್ಯಾಸಗಳ ಮೂಲಕ ಜಾಗತಿಕ ತಾಪಮಾನ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ವಿಧಾನಗಳನ್ನು ಪ್ರತಿಪಾದಿಸುತ್ತದೆ.


