ಪುತ್ತೂರು :ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿ(ರಿ)ಯ ಸಹಯೋಗದಲ್ಲಿ ‘ನಾರೀ ಶಕ್ತಿ ಸಂಗಮ’ ಇದೇ ಡಿಸೆಂಬರ್ 3ರಂದು ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯದ ಸಂಚಾಲಕಿ ರೂಪಲೇಖ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವ್ರು, ‘ನಾರಿ ಶಕ್ತಿ ಸಂಗಮ’ ಸಮ್ಮೇಳನವನ್ನ ಮುಖ್ಯವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗಿದೆ. ಸುಮಾರು 1000 ಕ್ಕಿಂತಲೂ ಅಧಿಕ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷತೆ, ಕೃಷಿ ಇನ್ನಿತರ ವಿಚಾರಗಳಲ್ಲಿ ಮಹಿಳೆಯರ ಪಾತ್ರದ ಸಂವಾದವನ್ನು ಏರ್ಪಡಿಸಲಾಗಿದೆ ಎಂದರು.
ಇನ್ನು ಈ ಸಮ್ಮೇಳನದಲ್ಲಿ ವೈದ್ಯರು, ವಕೀಲರು, ಅಧ್ಯಾಪಕಿಯರು ಸ್ವಯಂ ಸೇವಾ ಸಂಸ್ಥೆಯವರು, ಮಹಿಳಾ ಸಂಘಗಳು, ವಿದ್ಯಾರ್ಥಿನಿಯರು, ಗೃಹಣಿಯರು, ಹೋರಾಟಗಾರ್ತಿಯರು ಸುಮಾರು 11 ಕ್ಷೇತ್ರದ ಮಹಿಳೆಯರು ಭಾಗವಹಿಸಲಿದ್ದಾರೆ.
ಸಮ್ಮೇಳನವನ್ನ ಸಮಾಜ ಸೇವಕಿ ಡಾ.ಗೌರಿ ಪೈ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಚಿತ್ರನಟಿ ಮಾಳವಿಕಾ ಅವಿನಾಶ್, ಆಯುರ್ವೇದ ವೈದ್ಯರಾದ ಡಾ.ಲಕ್ಷ್ಮೀ ಎನ್ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಸಮ್ಮೇಳನದಲ್ಲಿ ನೇಕಾರರಿಂದ ನೇಯ್ದ ಸೀರೆಗಳ ಮಳಿಗೆ, ಗೋವು ಉತ್ಪನ್ನಗಳು, ಕರಕುಶಲ ಉತ್ಪನ್ನಗಳ ಮಳಿಗೆಗಳು ಇರಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ (ರಿ) ಟ್ರಸ್ಟಿ ಗಜಾನನ ಪೈ, ಸಂಚಾಲಕಿ ತೇಜಸ್ವಿನಿ, ಸಹ ಸಂಚಾಲಕಿ ವಿದ್ಯಾಗೌರಿ, ಸ್ಬರ್ಣೋದ್ಯಮಿ ರಾಜೀ ಬಲರಾಮ್ ಉಪಸ್ಥಿತರಿದ್ದರು.


