ಧಾರವಾಡ : ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ಡಿಜಿಟಲಿಕರಣ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಈ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ವಿಷಯ ಬೆಳಕಿಗೆ ಬಂದ ನಂತರ ಈ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ವಿರೋಧ ಪಕ್ಷದ ಸದಸ್ಯರನ್ನೂ ಒಳಗೊಂಡಂತೆ ಆಡಳಿತ ಪಕ್ಷದ ಸದಸ್ಯರ ಒಂದು ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಇದೀಗ ಅವ್ಯವಹಾರದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಮೇಯರ್ ಜ್ಯೋತಿ ಪಾಟೀಲ ಅವರಿಗೆ ವರದಿ ಸಲ್ಲಿಸಿದ್ದಾರೆ.


ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನುಷ್ಠಾನಗೊಂಡ ಡಿಜಿಟಲಿಕರಣ ವ್ಯವಸ್ಥೆಯಲ್ಲಿ ಒಟ್ಟು 3.26 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಸಮಿತಿ ತಿಳಿಸಿದ್ದು, ಆ ಬಗೆಗಿನ ಎಲ್ಲ ದಾಖಲೆಯನ್ನು ಮೇಯರ್ ಅವರಿಗೆ ನೀಡಿದೆ. ಈ ಕೆಲಸದ ಗುತ್ತಿಗೆ ಪಡೆದ ಗುತ್ತಿಗೆದಾರ ಹಾಗೂ ಈ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಲೂಟಿ ಹೊಡೆದ ಹಣವನ್ನು ಮರಳಿ ಸರ್ಕಾರದ ಬೊಕ್ಕಸಕ್ಕೆ ಭರಿಸುವ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಹತ್ವದ ದಾಖಲೆಗಳಾದ ಕಾಂಪಿಟಿಟರ್ ಬಿಡ್ಡಿಂಗ್, ಸರ್ಕಾರದ ಮಾರ್ಗಸೂಚಿ, ತಾಂತ್ರಿಕ ಪರಿಣಿತರ ಸೇವೆ, ವಿವಿಧ ಏಜೆನ್ಸಿಗಳ ಕಾರ್ಯಪದ್ಧತಿ, ವಿವಿಧ ವೈದ್ಯರ ಸೇವೆ ಪಡೆದ ಮಾಹಿತಿ, ಬಳಸಲಾದ ತಂತ್ರಜ್ಞಾನ, ವಿವಿಧ ತಾಂತ್ರಿಕ ತರಬೇತಿಗಳ ಮಾಹಿತಿ ಅಚ್ಚುಕಟ್ಟಾಗಿ ನಡೆಯದೇ ಇರುವುದನ್ನು ಸಮಿತಿ ಸದಸ್ಯರು ಮೇಯರ್ ಅವರಿಗೆ ನೀಡಿದ ವರದಿಯಲ್ಲಿ ದಾಖಲಿಸಿದ್ದಾರೆ. ಈ ವರದಿ ಪಡೆದ ಮೇಯರ್ ಜ್ಯೋತಿ ಪಾಟೀಲ ಅವರು ಈ ವರದಿಯನ್ನು ಪಾಲಿಕೆ ಆಯುಕ್ತರಿಗೆ, ಸ್ಮಾರ್ಟ್ ಸಿಟಿ ಎಂಡಿ ಹಾಗೂ ಸರ್ಕಾರಕ್ಕೆ ಸಲ್ಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಬಳಿಕ ಮಾತನಾಡಿದ ಮೇಯರ್ ಜ್ಯೋತಿ ಪಾಟೀಲ ವೀರಣ್ಣ ಸವಡಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ತನಿಖಾ ಸಮಿತಿಯಲ್ಲಿ ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಿವು ಹಿರೇಮಠ, ರಾಜು ಕಮತಿ, ಡಾ.ಮಯೂರ್ ಮೋರೆ ಅವರು ಸದಸ್ಯರಾಗಿ ಕೆಲಸ ಮಾಡಿ ಈ ಅವ್ಯವಹಾರದ ಸಮಗ್ರ ಮಾಹಿತಿಯನ್ನು ಮೇಯರ್ ಅವರಿಗೆ ನೀಡಿದ್ದು, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.


