ಚಾಮರಾಜನಗರ : ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹಳ್ಳಿಗಾಡಿನ ಜನರು ಭಯಭೀತರಾಗಿದ್ದಾರೆ.ಕಾಡಾನೆ ದಾಳಿ,ಚಿರತೆ ದಾಳಿಯ ನಡುವೆ ಇದೀಗ ಹುಲಿ ದಾಳಿ ಮಾಡಿದೆ. ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ಘಟನೆಯಲ್ಲಿ 22 ವರ್ಷದ ಯುವಕ ಗಾಯಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಶನಿವಾರ ತಿಳಿಸಿದೆ.
ಚಾಮರಾಜನಗರದ ಹೊನಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿ ಮಾಡಿತ್ತು,ಸುಮಾರು ಎರಡು ವರ್ಷ ಪ್ರಾಯದ ಹುಲಿಯನ್ನು ಕಾಡಿಗೆ ಹೊಡಿಸಲು ಜನರ ಗುಂಪು ತಯಾರಿಯಲ್ಲಿತ್ತು,ಹುಲಿಯನ್ನು ಓಡಿಸಲು ಪ್ರಯತ್ನಿಸಿದಾಗ ಮನು ಎಂಬ ಯುವಕನ ಮೇಲೆ ಮೇಲೆ ದಾಳಿ ಮಾಡಿದೆ. ಆತನ ಕುತ್ತಿಗೆ ಮತ್ತು ಕೈಗಳಿಗೆ ಗಾಯಗಳಾಗಿದ್ದು ಸದ್ಯ ಮನು ಆರೋಗ್ಯ ಸ್ಥಿರವಾಗಿದೆ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


