ಗುರುಮಠಕಲ್ : ಸಮೀಪದ ಕಿಲ್ಲನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಹೊರವಲಯದ ಹತ್ತಿ ಹೊಲದಲ್ಲಿ ಸುಮಾರು 150 ಕೆ.ಜಿ ತೂಕದ ಬೃಹತ್ ಗಾತ್ರದ ಮೊಸಳೆ ಗುರುವಾರ ಪ್ರತ್ಯಕ್ಷವಾಗಿದೆ.
ಗ್ರಾಮದ ರೈತರು ಎಂದಿನಂತೆ ಹತ್ತಿಯನ್ನು ಬಿಡಿಸಲು ಬೆಳಿಗ್ಗೆ ಹೊಲಕ್ಕೆ ತೆರಳಿದ್ದಾರೆ. ಆದರೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೆರೆಯಿಂದ ಹೊಲದ ಕಡೆ ಚಲಿಸಿಕೊಂಡು ಹೋದ ವಿಭಿನ್ನವಾದ ಪ್ರಾಣಿಯ ಹೆಜ್ಜೆ ಗುರುತು ನೋಡಿ ವಿಚಲಿತಗೊಂಡ ರೈತರು, ಆ ಹೆಜ್ಜೆ ಗುರುತು ಹಿಂಬಾಲಿಸಿಕೊಂಡು ಹೋಗಿ ನೋಡಿದಾಗ ಹತ್ತಿ ಹೋಲದ ಮೇರೆಗೆ ಮೊಸಳೆ ಮಲಗಿರುವುದನ್ನು ಗಮನಿಸಿದ ರೈತರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಎಂ. ಲಕ್ಷ್ಮಣ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನು ರಕ್ಷಣೆ ಮಾಡಲಾಯಿತು. ನಂತರ ಅದನ್ನು ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುವುದಾಗಿ ಅರಣ್ಯಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಚಂದ್ರೇಶ್ ನಿಲಕಟ್ಟಿ, ಗಸ್ತುವನ ಪಾಲಕ ಮಮ್ಮದ್ ರಿಜ್ವಾನ್ ಹಾಗೂ ಅಮರೇಶ ನಾಯಕ, ಸಂತೋಷ ಕುಮಾರ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.


