ಗಂಗಾವತಿ : ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇಗುಲದಲ್ಲಿ ಭಕ್ತರಿಂದ ಸಂಗ್ರಹವಾಗಿರುವ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಬುಧವಾರ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ನೇತೃತ್ವದಲ್ಲಿ ನಡೆಯಿತು. ಕಳೆದ 46 ದಿನಗಳಲ್ಲಿ ಒಟ್ಟು 34.86 ಲಕ್ಷ ರೂಪಾಯಿ ಮೊತ್ತದ ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಕಳೆದ ಜನವರಿ 5ರಂದು ಹುಂಡಿ ಎಣಿಕೆ ಮಾಡಲಾಗಿತ್ತು. ಆಗ 27.71 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು.
ಹೆಚ್ಚುತ್ತಿರುವ ವಿದೇಶ ಹಣ:
ಅಂಜನಾದ್ರಿ ದೇಗುಲಕ್ಕೆ ಕೇವಲ ಕನರ್ಾಟಕ ಮಾತ್ರವಲ್ಲ ಭಾರತದ ವಿವಿಧ ರಾಜ್ಯಗಳಿಂದ ಭಕ್ತ ಸಮೂಹ ಬರುತ್ತಿದೆ. ಇದೀಗ ವಿದೇಶಿಗರಿಗೂ ಹನುಮಪ್ಪ ಅಚ್ಚುಮೆಚ್ಚಾಗಿದ್ದು, ಪ್ರತಿ ತಿಂಗಳು ಇಲ್ಲಿಗೆ ಭೇಟಿ ನೀಡುತ್ತಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಸ್ಥಳಿಯರನ್ನು ಗಮನಿಸಿ ವಿದೇಶಿಯರು ಕೂಡ ಹುಂಡಿಗೆ ಕಾಣಿಕೆ ಹಾಕುತ್ತಿದ್ದಾರೆ. ಕೆಲ ವಿದೇಶಿಗರು ಸ್ಥಳೀಯ ಭಾರತೀಯ ನಾಣ್ಯಮ, ರೂಪಾಯಿ ಹಾಕಿದರೆ ಕೆಲವರು ತಮ್ಮ ತವರು ದೇಶದ ಹಣವನ್ನೆ ಹುಂಡಿಗೆ ಹಾಕುತ್ತಿದ್ದಾರೆ.
ಹೀಗೆ ಪ್ರತಿ ತಿಂಗಳು ಹುಂಡಿ ಎಣಿಕೆ ಮಾಡಿದಾಗ ವಿದೇಶಿ ನಾಣ್ಯ-ನೋಟುಗಳ ಸಂಖ್ಯೆ ಹೆಚ್ಚುತ್ತಿದೆ. ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ ಹತ್ತು ಹಾಗೂ ಐವ್ವತ್ತು ರೂಪಾಯಿ ಮುಖಬೆಲೆಯ ನೇಪಾಳದ ನೋಟು ಪತ್ತೆಯಾಗಿದೆ.
ಅಲ್ಲದೇ ವಿವಿಧ ಮುಖಬೆಲೆಯ ಆರು ನೇಪಾಳದ ನಾಣ್ಯ, ಯುನೈಟೆಡ್ ಕಿಂಗ್ಡಂ, ಯುರೋಪ ಮತ್ತು ಆಸ್ಟ್ರೇಲಿಯಾಕ್ಕೆ ಸೇರಿದ ವಿವಿಧ ಮುಖಬೆಲೆಯ ನಾಣ್ಯ ಪತ್ತೆಯಾಗಿವೆ. ಇದುವರೆಗೂ ಸರಿಸುಮಾರು ಐನ್ನೂರಕ್ಕೆ ಹೆಚ್ಚು ವಿದೇಶಿ ನೋಟು-ನಾಣ್ಯ ಸಂಗ್ರಹವಾಗಿದ್ದು, ಕಂದಾಯ ಇಲಾಖೆ ಸಂಗ್ರಹಿಸಿಟ್ಟಿದೆ.


