ಕೊಪ್ಪಳ : ರಾಯಚೂರು ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕೆಳಭಾಗದ ಜೀವನಾಡಿಯಾಗಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟಿನ ಗೇಟ್ ನಂಬರ್ 19 ಚೈನ ಲಿಂಕ್ ಕಳಚಿ ಹಾನಿಗೊಳಗಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟಿನ ಗೇಟ್ ನ ಕಟ್ ಆಗಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಆಣೆಕಟ್ಟೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಂಬರ್ 19 ರ ಗೇಟ್ ಚೈನ್ ಲಿಂಕ್ ತುಂಡು ಆಗಿದ್ದು ನೀರಿನ ರಭಸಕ್ಕೆ ಗೇಟ್ ಕಣ್ಮರೆಯಾದ ಘಟನೆ ಶನಿವಾರ 10.08.2024ರ ರಾತ್ರಿ 11:10 ಗಂಟೆಯ ಸುಮಾರಿಗೆ ಸಂಭವಿಸಿದೆ. ಈ ಘಟನೆಯಿಂದ ನದಿ ಪಾತ್ರಕ್ಕೆ 35,000 ಕ್ಯೂಸೆಕ್ಸ್ ನೀರು ಗೇಟ್ ನಂಬರ್ 19 ಮುಖಾಂತರ ಹರಿದು ಹೋಗಿದ್ದು ಒಟ್ಟಾರೆ ಎಲ್ಲಾ ಗೇಟ್ ಗಳ ಮೂಲಕ 48000 ಕ್ಯೂಸೆಕ್ಸ್ ನೀರು ನದಿಯ ಮೂಲಕ ಹೊರಹರಿವು ಹೋಗುತ್ತಿದೆ.
ಗೇಟ್ ನಂಬರ್ 19ರ ಅವಘಡ ದಿಂದ ಅಡೆತಡೆ ಇಲ್ಲದೆ ನದಿಗೆ ನೀರು ಹರಿಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ ಹಾಗೂ ತುಂಗಭದ್ರಾ ಆಡಳಿತ ಮಂಡಳಿ ಸಾರ್ವಜನಿಕರು ನದಿ ಪಾತ್ರದಿಂದ ದೂರವಿರಬೇಕು ಎಂದು ಜನತೆಗೆ ಎಚ್ಚರಿಕೆಯನ್ನು ನೀಡಿರುತ್ತದೆ.
ವಿಷಯ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯಲ್ಲಿಯೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಆಣೆಕಟ್ಟೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.


