ಕಡಬ : ಪ್ರತಿ ಯುವಕ – ಯುವತಿಯರಿಗೆ ಉದ್ಯೋಗ ಸಿಗಬೇಕು. ಪ್ರತಿ ಮನೆಯೂ ಸದೃಢಗೊಂಡಾಗ ಈ ಸಮಾಜ ಬಲಿಷ್ಠವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಗೆ ಉದ್ದಿಮೆಗಳು ಬರಬೇಕು. ವಿದೇಶಿ ಬಂಡವಾಳ ಹೂಡಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮೆಡಿಕಲ್ ಟೂರಿಸಂ, ಶೈಕ್ಷಣಿಕ ಟೂರಿಸಂ, ಪ್ರವಾಸೋದ್ಯಮಕ್ಕೆ ವಿಫುಲ ಸಾಧ್ಯತೆಗಳಿವೆ. ಹೀಗಿರುವಾಗ ನಮ್ಮೂರಿನ ಯುವಕ – ಯುವತಿಯರು ಉದ್ಯೋಗಕ್ಕಾಗಿ ಹೊರ ಊರುಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿಯಾದರೆ ಅದೇಷ್ಟೋ ಹೆತ್ತವರು ತಮ್ಮ ಮಕ್ಕಳ ಜೊತೆಯಲ್ಲೇ ಜೀವನ ಸಾಗಿಸಬಹುದು. ಇದನ್ನು ನನಸು ಮಾಡುವುದೇ ತನ್ನ ಹಾಗೂ ಕಾಂಗ್ರೆಸಿನ ಆದ್ಯತೆ ಎಂದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಸಂದೇಹ ಬೇಡ ಎಂದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಉಸ್ತುವಾರಿ ರಮಾನಾಥ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. ದೇಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಈಗ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು ಎಂದ ಅವರು, ಪದ್ಮರಾಜ್ ಆರ್. ಪೂಜಾರಿ ಅವರನ್ನು ಸಂಸತ್ ಸದಸ್ಯರಾಗಿ ಮಾಡಬೇಕಿದೆ ಎಂದರು.
ಸುಳ್ಯ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ, ಸಂಯೋಜಕರಾದ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ, ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಪಿ.ಪಿ. ವರ್ಗೀಸ್, ವೆಂಕಪ್ಪ ಗೌಡ, ತಾಪಂ ಮಾಜಿ ಸದಸ್ಯರಾದ ಅಶೋಕ್ ನೆಕ್ರಾಜೆ, ಫಝಲ್, ಪ್ರಮುಖರಾದ ಸರ್ವೋತ್ತಮ ಗೌಡ, ಕಿರಣ್ ಬುಡ್ಲೆಗುತ್ತು, ಬಾಲಕೃಷ್ಣ ಬಲ್ಲೇರಿ, ಜಯರಾಜ್, ಗಣೇಶ್ ಕೈಕುರೆ ಮೊದಲಾದವರು ಉಪಸ್ಥಿತರಿದ್ದರು.


